Sunday, August 22, 2010

ಸಂಭ್ರಮದ ಸುದಿನಾ......!!..!!

ನೀನು ಬಂದ ಮೇಲೆ ತಾನೇ ಇಷ್ಟು ಚೆನ್ನ ಈ ಬಾಳು,

ನೀನು ತಾನೇ ಹೇಳಿಕೊಟ್ಟೆ ಪ್ರೀತಿಸಲು !

ಕಂಗಳು ಹಿಂದೆಂದೂ ಕಾಣದ ಹೊಸದೊಂದು

ಲೋಕಕೆ ನನ್ನನ್ನು ನೀ ಸೆಳೆದೆ !!

ಲಾ ಲ ಲ ಲಾ ಲಾ ಲ........ಲಾ ಲಾ ಲ ಲಾ ಲಾ ಲ ......ಲಾ ಲಾ ಲಾ !





ಸ್ನೇಹಿತರೆ, ಇದೇನಿದು ಲೇಖನದ ತಲೆ ಬರಹ ಏನೋ ಇದೆ, ಹಾಡೆಲ್ಲ ಇದೆ ಇದೇನಿದೂ ಅಂದುಕೊಂಡಿರಾ?

ಗಾಬರಿಯಾಗಬೇಡಿ, ಈ ಹಾಡು ಸಿನೆಮಾದಲ್ಲಿ ಪ್ರಿಯಕರ ಪ್ರೇಯಸಿಗೆ ಹಾಡಿದ್ದ ಹಾಡು ಇದು ಆಲ್ವಾ?

ಆದರೆ ಈ ಹಾಡನ್ನು ನಾನು ಬ್ಲಾಗ್ ಲೋಕಕ್ಕೆ ಅಂತ ಉಪಯೋಗಿಸಿದ್ದು! ಈ ಹಾಡು ಬ್ಲಾಗ್ ಲೋಕಕ್ಕೂ ಅನ್ವಯಿಸುತ್ತದೆ ಅಲ್ಲವೇ?! ಇರಲಿ ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ, ಅದೇನೆಂದರೆ ಆಗಸ್ಟ್ ೨೨ ಬ್ಲಾಗ್ ಲೋಕದ ಜನರಿಗೆ ಸುದಿನ, ಕಾರಣ ಆ ದಿನದ ಬ್ಲಾಗಿಗರ ಕೂಟ! ಅದಕ್ಕೂ ಮೊದಲು ಶಿವೂ ಮತ್ತು ಅಜಾದ್ ಅವರ ಪುಸ್ತಕ ಬಿಡುಗಡೆ ಸಮಾರಂಭ! ಇದು ಸುಮಾರು ಜನರಿಗೆ (ಬ್ಲಾಗಿಗರಿಗೆ) ಗೊತ್ತಿರುವ ವಿಷಯವೇ ಸರಿ!


ಆ ದಿನ ಅಂದರೆ ಆಗಸ್ಟ್ ೨೨, ೨೦೧೦ ಬೆಳಗ್ಗೆ ಸುಮಾರು ೧೧ ಗಂಟೆಗೆ ಸಮಾರಂಭ ಕಾರ್ಯಕ್ರಮ ಶುರುವಾಯಿತು.



ಮೊದಲಿಗೆ ಪ್ರವೀಣ್ (ಮನದಾಳದ ಮಾತು) ಅವರಿಂದ ಕಾರ್ಯಕ್ರಮದ ವಿವರಣೆ, ನಂತರ ಪ್ರಾರ್ಥನೆ ಮತ್ತು ಅಥಿತಿಗಳೊಂದಿಗೆ ದೀಪ ಬೆಳಗುವ ಕಾರ್ಯಕ್ರಮ ಆನಂತರ ಶಿವೂ ಅವರ "ಗುಬ್ಬಿ ಎಂಜಲು" ಮತ್ತು ಅಜಾದ್ ಅವರ "ಜಲನಯನ" ಪುಸ್ತಕಗಳ ಲೋಕಾರ್ಪಣೆ ಹೀಗೆ ಪ್ರಾರಂಭವಾಯಿತು!
ಜೊತೆಗೆ ಭಾಷಣ ಶುರುವಾಯಿತು. ಮೊದಲು ಮಾತನಾಡಿದವರು ಶಿವೂ, ನನಗೆ ವೇದಿಕೆಯ ಮೇಲೆ ನಿಂತು ಮಾತನಾಡಲು ಬರುವುದಿಲ್ಲ, ನನ್ನ ಮೊದಲ ಪುಸ್ತಕ 'ವೆಂಡರ್ ಕಣ್ಣು' ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ ನಾನು ಭಾಷಣ ಮಾಡುವುದರಿಂದ ತಪ್ಪಿಸಿಕೊಂಡಿದ್ದೆ, ಆದರೆ ಈಗ ಸಿಕ್ಕಿಹಾಕಿಕೊಂಡಿದ್ದೇನೆ, ನನ್ನ ಮಾತನ್ನು ನನ್ನ ಲೇಖನ ಮತ್ತು ಛಾಯ ಚಿತ್ರಗಳಂತೆ ಸಹಿಸಿಕೊಳ್ಳಿ, ನಾನು ಹೀಗೆ ಮಾತನಾಡುತ್ತಿರುವುದು ಮೊದಲನೇ ಸಲ ಆದ್ದರಿಂದ ನನ್ನನ್ನು ಸಹಿಸಿಕೊಳ್ಳಿ ಎಂದು ಹೀಗೆ ಏನೇನೋ ಹೇಳುತ್ತಲೇ ಅಧ್ಬುತವಾಗಿ ಭಾಷಣ ಮಾಡಿ, ತಮ್ಮ ಮಾತಿನಿಂದ ಎಲ್ಲರನ್ನು ಕಟ್ಟಿಹಾಕಿದರು!


ನಂತರ ಮಾತನಾಡಿದವರು ಡುಂಡಿರಾಜ್ ಅವರು, ಎಂದಿನಂತೆ ತಮ್ಮ ಹಾಸ್ಯ ಶೈಲಿಯಲ್ಲೇ (ನಾನು ನೇರವಾಗಿ ಅವರನ್ನು ನೋಡಿ ಭಾಷಣ ಕೇಳಿದ್ದು ಇದೆ ಮೊದಲು. ಆದರೆ ಟೀವಿಯಲ್ಲಿ ನೋಡಿ ಮತ್ತು ಅವರಿವರ ಬಾಯಿಂದ ಕೇಳಿ ತಿಳಿದಿದ್ದರಿಂದ ಎಂದಿನಂತೆ ಎನ್ನುವ ಪದ ಉಪಯೋಗಿಸಿದೆ) ಸೊಗಸಾಗಿ ಭಾಷಣ ಮಾಡಿ ಎಲ್ಲರನ್ನು ನಗಿಸಿದರು! ನಂತರ ಶ್ರೀ ಹಾಲ್ದೊಡ್ಡೇರಿ ಸುಧೀಂಧ್ರ ಅವರು ಮಾತನಾಡಿದರು!
ಆ ನಂತರದಲ್ಲಿ ಡಾ. ಶೇಷಾ ಶಾಸ್ತ್ರಿ ಅವರ ಭಾಷಣವಿತ್ತು!! ಕೊನೆಯಲ್ಲಿ ಮಾತನಾಡಿದವರೇ ಅಜಾದ್! ಇವರ ಭಾಷಣ ಬಹಳ ಕೆಟ್ಟದಾಗಿತ್ತು (ಅಯ್ಯಯ್ಯೋ ತಪ್ಪು, ತಪ್ಪು ಕ್ಷಮಿಸಿ. ರಾಮ ರಾಮ, ಇದೇನಾಗಿಹೋಯಿತು! ವ್ಯಾಕರಣ ತಪ್ಪಿಹೋಯಿತು.)(ಅಜಾದ್ ಸಾರ್, ಕ್ಷಮಿಸಿ ತಪ್ಪು ತಿಳಿದು ಕೊಳ್ಳಬೇಡಿ ಸುಮ್ಮನೆ ತಮಾಷೆಗಾಗಿ ಈ ತುಂಟಾಟ ಅಷ್ಟೇ., ಅನ್ಯತಾ ಭಾವಿಸಬೇಡಿ ಪ್ಲೀಸ್!) ಅಲ್ಲಲ್ಲ ಕಟ್ ಕಟ್ ಆಗುತಿತ್ತು ಪಾಪ ಅವರಿಗೆ ಒಂದೇ ಸಮನೆ ಮಾತನಾಡಲು ಅವಕಾಶ ಸಿಗಲಿಲ್ಲ, ಆದರೂ ಅವರ ಹಸನ್ಮುಖದ, ಏಕತಾನತೆಯ ಮಾತುಗಳು ಮತ್ತು ಭಾಷಣ ಶೈಲಿ ಸುಂದರವಾಗಿತ್ತು !!!
ಈ ಕಾರ್ಯಕ್ರಮಗಳ ಚಂದದ ನಿರೂಪಣೆ ಮತ್ತು ನಿರ್ವಹಣೆ ಶ್ರೀಮತಿ ಸುಗುಣ ಮಹೇಶ್ (ಮೃದುಮನಸು) ಅವರದು.




ಪುಸ್ತಕಗಳ ಬಗೆಗಿನ ಮಾತುಕತೆ, ವಿಚಾರ ವಿಮರ್ಶೆ ಭಾಷಣ ಇವುಗಳ ನಂತರ ಅಥಿತಿಗಳಿಗೆ ಸನ್ಮಾನ ಸಮಾರಂಭ ಕೈಗೊಳ್ಳಲಾಗಿತ್ತು!!


ಒಟ್ಟಾರೆ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು !! ಈ ಸಮಾರಂಭ ಮುಗಿದು, ಸ್ವಲ್ಪ ಹೊತ್ತಿನ ವಿರಾಮದ ನಂತರ ಬ್ಲಾಗಿಗರ ಕೂಟ ಶುರುವಾಯಿತು.
ಈ ವಿರಾಮದ ಸಮಯದಲ್ಲೇ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು.

ಬ್ಲಾಗಿಗರ ಕೂಟ ಶುರುವಾಯಿತು. ಮೊದಲಿಗೆ ಹಾಡು, ಮಾತು ನಿರೂಪಣೆ ಹೀಗೆ ಸಾಗುತ್ತಾ, ಹರಟೆ, ಚೇಷ್ಟೆ, ಉಡುಗೊರೆ ಹಂಚುವ ಕಾರ್ಯಕ್ರಮ ಹೀಗೆ ಮುಂದುವರೆಯಿತು.
ಪ್ರಾರಂಭದಲ್ಲಿ ಹಲವರಿಗೆ ಒಬ್ಬರಿಗೊಬ್ಬರ ಪರಿಚಯವಿಲ್ಲದೆ ಮಿಕ - ಬಕ ಗಳಂತೆ ಒಬ್ಬರನ್ನೊಬ್ಬರು ಸುಮ್ಮನೆ ನೋಡುತ್ತಿದ್ದರು / ನೋಡಿಕೊಳ್ಳುತ್ತಿದ್ದರು! :) :)
ಅದೇ ಕೊನೆಯಲ್ಲಿ ಒಬ್ಬರಲ್ಲೊಬ್ಬರು ಎಷ್ಟು ಬೆರೆತು ಹೋದರೆಂದರೆ, ಎಲ್ಲರೂ ಎಷ್ಟೋ ವರ್ಷಗಳಿಂದ ಪರಿಚಯದಿಂದ ಪಳಗಿದಂತಹ ವಾತಾವರಣ ಸೃಷ್ಟಿಯಾಗಿತ್ತು !!!
ಅಲ್ಲಿ ಅನುಭವಿಸಿದ ರಸಕ್ಷಣಗಳನ್ನು ಎಲ್ಲವೂ ಮಾತಿನಲ್ಲಿ ವಿವರಿಸಲಾಗುವುದಿಲ್ಲ. ಅಲ್ಲಿದ್ದು ಅದನ್ನೆಲ್ಲ ಅನುಭವಿಸಿದವರಿಗೆ ಗೊತ್ತು ಅದರ ಸ್ವಾದ !!
ಫೋಟೋಗಳಲ್ಲಿ ತೋರಿಸೋಣವೆಂದರೆ ನಾನು ಯಾವ ಫೋಟೋನೂ ಅಲ್ಲಿ ತೆಗೆಯಲಿಲ್ಲ ಯಾಕೆಂದರೆ ನಮ್ಮ ಶಿವೂ (ಛಾಯ ಕನ್ನಡಿ) ಅವರು ಇರುವಾಗ ನಮಗೇಕೆ ಆ ಚಿಂತೆ ಅಲ್ಲವೇ ?!
ನೀವು ಫೋಟೋಗಳನ್ನು ಶಿವೂ (ಛಾಯ ಕನ್ನಡಿ) ಮತ್ತು ಪ್ರಕಾಶ್ ಹೆಗ್ಡೆ (ಇಟ್ಟಿಗೆ ಸಿಮೆಂಟು ) ಇವರ ಬ್ಲಾಗ್ನಲ್ಲಿ ನೋಡಬಹುದು (ಕೆಲವರು ಆಗಲೇ ನೋಡಿರಲೂ ಬಹುದು ಅಲ್ಲವೇ)

ಮತ್ತೊಮ್ಮೆ ಬ್ಲಾಗಿಗರ ಕೂಟದಲ್ಲಿ ಇನ್ನೂ ಹೆಚ್ಚೆಚ್ಚು ಜನ ಸೇರೋಣ ಎಂದು ಆಶಿಸುತ್ತಾ ........!

Sunday, August 1, 2010

ಸಣ್ಣ ಕಥೆ.....?!

ಈ ಕಥೆ ಕೇವಲ ಕಾಲ್ಪನಿಕ, ಯಾವುದೇ ವ್ಯಕ್ತಿ ಅಥವಾ ವಿಚಾರಗಳ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ !

ಮುಚ್ಚಿದ್ದ ದೇವಸ್ಥಾನದ ಹೊರಗಿನ ಜಗುಲಿಯ ಮೇಲೆ ಒಬ್ಬಂಟಿಯಾಗಿ ಕುಳಿತಿದ್ದ ರಾಮಯ್ಯನವರು, ಅಷ್ಟೇನೂ ಬಿಸಿಲಿಲ್ಲದ ಮಧ್ಯನ್ಹದಲ್ಲಿ, ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡುತ್ತಾ ಹಾಗೆಯೇ ಅನ್ಯ ಮನಸ್ಕರಾಗಿ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು.
ಅವರನ್ನು ಗಮನಿಸಿ ನೋಡುವ ಯಾರಿಗಾದರೂ ತಿಳಿಯುತ್ತಿತ್ತು ಅವರು ಜೀವನದಲ್ಲಿ ದುಡಿದೂ ದುಡಿದೂ ಬಳಲಿರುವ ಕಷ್ಟ ಜೀವಿ ಎಂದು!

ಆಗಿನ ಕಾಲದ ನಿಯಮವೆಂಬಂತೆ, ತಕ್ಕಮಟ್ಟಿಗೆ ಓದು ಮುಗಿಸಿ, ಕೆಲಸಕ್ಕೆ ಸೇರಿ,
ಹಿರಿಯರು ಒಪ್ಪಿ ಮಾಡಿದ ಸಂಪ್ರದಾಯ ಮದುವೆಯಿಂದ, ಮಡದಿಯ ಜೊತೆ, ಬರುವಷ್ಟು ಸಂಬಳದಲ್ಲೇ ತೃಪ್ತ ಜೀವನ ಸಾಗಿಸುತ್ತಿದ್ದರು ರಾಮಯ್ಯ! ರಾಮಯ್ಯನವರ ಹೆಂಡತಿ ಜಾನಕಮ್ಮನವರು. ಅನ್ಯೋನ್ಯ ದಾಂಪತ್ಯ ಇವರದು.
ಹಿರಿಯರೆಂದರೆ ಗೌರವ, ಭಯ ಭಕ್ತಿ, ಪೂಜ್ಯನೀಯ ಭಾವನೆ ಮತ್ತು ಸೇವಾ ಮನೋಭಾವ ಇಬ್ಬರಲ್ಲೂ ಸಮಾನವಾಗಿತ್ತು. ಆದ್ದರಿಂದ ಇವರೂ ಆದರ್ಶ ದಂಪತಿಗಳಾಗಿಯೂ ಹೆಸರಾಗಿದ್ದರು! ಜೀವನದ ಬಂಡಿ ಸಾಗುತ್ತಿತ್ತು.

ಮನೆಯವರ ಅವಶ್ಯಕತೆ, ಮಕ್ಕಳ ವಿಧ್ಯಾಭಾಸ ಎಲ್ಲವನ್ನೂ ತಮಗೆ ಬರುತ್ತಿದ್ದ ನಾಲ್ಕಂಕೆ ಸಂಬಳದಲ್ಲೇ ಸರಿದೂಗಿಸುತ್ತಿದ್ದರು.
ಮಕ್ಕಳು ಬೆಳೆದು ದೊಡ್ದವರಾಗುವಷ್ಟರಲ್ಲಿ ತಮ್ಮ ಕಷ್ಟಾರ್ಜಿಥದಿಂದ ಒಂದು ಸ್ವಂತ ಮನೆಯನ್ನು ಮಾಡಿಕೊಂಡರು. ನಂತರದಲ್ಲಿ ಮಕ್ಕಳ ವಿಧ್ಯಾಭ್ಯಾಸ ಮುಗಿದು, ಅವರು ಕೆಲಸಕ್ಕೆ ಸೇರಿ ಅವರುಗಳಿಗೆ ಮದುವೇ ಮತ್ತು ಇತರ ಸಮಾರಂಭಗಳನ್ನು ಮಾಡಿ ಮುಗಿಸುವ ಹೊತ್ತಿಗೆ, ರಾಮಯ್ಯನವರ ನಿವೃತ್ತಿಯ ಸಮಯವೂ ಬಂದಿತು. ತಮ್ಮ ದುಡಿಮೆ ಮತ್ತು ಪತ್ನಿಯ ಸಹಕಾರದಿಂದ, ಜೀವನದ ಏಳು ಬೀಳು, ಕಷ್ಟಸುಖ, ಜೀವನದ ಜಂಜಾಟ ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ಪೂರೈಸಿದ್ದರು!!

ನಿವೃತ್ತರಾದಮೇಲೆ, ತಮ್ಮ ಜೀವನ ಸಂಜೆಯನ್ನು ತಮ್ಮವರೊಂದಿಗೆ ಆರಾಮವಾಗಿ ಕಳೆಯಬೇಕೆಂದು ಕೊಂಡಿದ್ದ ರಾಮಯ್ಯನವರಿಗೆ ಮತ್ತು ಜಾನಕಮ್ಮನವರಿಗೆ, ಬದಲಾದ ಮನೆಯ ಪರಿಸ್ಥಿತಿಯನ್ನು ನೋಡಿ ಮನಸ್ಸಿಗೆ ನೋವು ಉಂಟಾಗುತ್ತಿತ್ತು! ಒಳ್ಳೆಯ ಸಭ್ಯತೆ, ಸಂಸ್ಕಾರಗಳನ್ನು ನೀಡಿ ಬೆಳೆಸಿದ್ದ ಮಕ್ಕಳೂ ತಮ್ಮ ತಮ್ಮ ಮದುವೆಯ ನಂತರ ಅವರುಗಳ ಬದಲಾದ ಬುದ್ಧಿಯನ್ನೂ ಕಂಡು ದಂಪತಿಗಳಿಗೆ, ಅಲ್ಲಿನ ಸ್ಥಿತಿ ಅಸಹನೀಯವೆನಿಸುತ್ತಿತ್ತು....!
ಇದೆ ಕೊರಗಿನಲ್ಲೇ ಒಂದು ದಿನ ಜಾನಕಮ್ಮನವರು ಕೊನೆಯುಸಿರೆಳೆದರು. ಪತ್ನಿಯ ಅಗಲಿಕೆಯ ನೋವಿಗಿಂತಾ ಹೆಚ್ಚಾಗಿ, ತಮ್ಮ ಮಕ್ಕಳ ನಡವಳಿಕೆ, ಸೊಸೆಯರ ದಬ್ಬಾಳಿಕೆ, ಉದಾಸೀನ ಎಲ್ಲವನ್ನೂ ಅನುಭವಿಸುತ್ತಿದ್ದ ರಾಮಯ್ಯನವರಿಗೆ ಜೀವನವೇ ಭಾರವಾಗಿತ್ತು.

ಮನೆ ಮತ್ತು ಮಕ್ಕಳ ಏಳಿಗೆಗಾಗಿ ತಮ್ಮ ಜೀವನ ಸವೆಸಿದ್ದ ದಂಪತಿಗಳಿಗೆ ಜೀವನ ಸಂಧ್ಯೆಯಲ್ಲಿ ಸುಖ ಸಂತೋಷ ಎಂಬುದು ಮರೀಚಿಕೆಯಾಗಿತ್ತು! ಈಗ ರಾಮಯ್ಯನವರು ನೊಂದ ಒಂಟಿ ಜೀವ.
ತಮ್ಮ ಕಾಲದಲ್ಲಿ ಹಿರಿಯರಿಗೆ ಸಿಗುತ್ತಿದ್ದ ಗೌರವ, ಬದಲಾದ ಈ ಕಾಲದಲ್ಲಿ ತಮಗೆ ಸಿಗುತ್ತಿರುವ ಈ ರೀತಿಯ ಗೌರವ ಎರೆಡನ್ನೂ ನೆನೆದು ಅವರ ದುಃಕ್ಕದ ಕಟ್ಟೆಯೊಡೆದು ಕಣ್ಣಂಚಿನಲ್ಲಿ ನೀರು ಜಿನುಗಿತ್ತು!
ತಂದೆಯಿಂದ ಬಂದ ಮನೆ ಮತ್ತು ಆಸ್ತಿಯನ್ನು ಅನುಭವಿಸುವುದು ತಮ್ಮ ಹಕ್ಕೆಂದು ತಿಳಿದ ಮಕ್ಕಳು, ಅದಕ್ಕೆ ಕಾರಣರಾದವರನ್ನೇ ಭಾರ, ಬೇಕಾಬಿಟ್ಟಿ ಎಂದು ಭಾವಿಸುವ ಮಕ್ಕಳಿಗೆ, ಆ ಹಿರಿ ಜೀವ ಆ ನೊಂದ ಮನಸ್ಸಿನಲ್ಲೂ ತಮ್ಮ ಮಕ್ಕಳಿಗೆ ಒಳ್ಳೆಯದು ಮಾಡೆಂದು ದೇವರಲ್ಲಿ ಪ್ರಾರ್ಥಿಸುತ್ತಾ, ಭಾರವಾದ ಮನಸ್ಸಿನಿಂದ ಮನೆ ಕಡೆಗೆ ಹೆಜ್ಜೆ ಹಾಕಿದರು........!!!


ಇಲ್ಲಿ ಬರೆದಿರುವ ಈ 'ಸಣ್ಣ ಕಥೆ' ಸಮಾಜದಲ್ಲಿ ನೈಜ ಘಟನೆಯೂ ಇರಬಹುದು! ಎಲ್ಲರೂ ಹೀಗೆ ಇರುತ್ತಾರೆಂದೇನೂ ಇಲ್ಲಾ.
ಇದು ಕೇವಲ ನಾಣ್ಯದ ಒಂದು ಮುಖದಂತೆ ಎಂದರೆ ತಪ್ಪಾಗಲಾರದು ಅಲ್ಲವೇ?