Friday, May 1, 2009

ಹೀಗೊಂದು ವಿಚಿತ್ರ ಪ್ರೇಮ ಕಥೆ....!

ಸ್ನೇಹಿತರೆ, ಈ ಕಥೆ ನನ್ನ ತುಂಟ ಮನಸ್ಸಿನ ಒಂದು ತುಂಟ ಕಲ್ಪನೆ! ಇದರಲ್ಲಿ ಯಾವುದಾದರು ವಸ್ತು, ವ್ಯಕ್ತಿ ಅಥವಾ ವಿಷಯ ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ!!


ಆಕಾಶ್, ವಸುಧಾ(ಹುಡುಗಿ) ಮತ್ತು ಆದಿತ್ಯ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು! ಇವರ ಮೂವರ ಗೆಳೆತನ ಎಷ್ಟು ಗಾಢವಾದುದೆಂದರೆ, ಆಫೀಸಿನ ಇತರರಿಗೂ ಇವರನ್ನು ಕಂಡರೆ ಹೊಟ್ಟೆಕಿಚ್ಚು/ಅಸೂಯೆ ಉಂಟಾಗುತ್ತಿತ್ತು! ಹೀಗಿರುವಾಗ, ನಿಧಾನವಾಗಿ ಇವರ ಗೆಳೆತನ ಇಷ್ಟ/ಪ್ರೀತಿಗೆ ತಿರುಗುತ್ತಿತ್ತು. ಈ ವಿಷಯ ಆಫೀಸಿನವರಿಗೆಲ್ಲಾ ತಿಳಿಯುತ್ತಾ ಹೋದಂತೆ, ಎಲ್ಲರಿಗೂ ಕುತೂಹಲ ಹುಟ್ಟಿತು. ಆಕಾಶ್ ಮತ್ತು ಆದಿತ್ಯ ಇಬ್ಬರೂ ವಸುಧಳನ್ನು ಇಷ್ಟಪಡುತ್ತಿದ್ದಾರಂತೆ, ಆದರೆ ವಸುಧಾ ಇವರಿಬ್ಬರಲ್ಲಿ ಯಾರನ್ನು ಪ್ರೀತಿಸುತ್ತಾಳೆ ಎನ್ನುವುದೇ ಚರ್ಚೆಯ ವಿಷಯವಾಗಿಹೋಯಿತು! ನಿಧಾನವಾಗಿ ಈ ಸುದ್ದಿ ಬಾಸ್ ಗೂ ಸಹ ತಲುಪಿತು.
ಸ್ನೇಹ, ಇಷ್ಟಕ್ಕೆ ತಿರುಗಲು ಕೆಲವೊಮ್ಮೆ ಕಾರಣ ಇರುವುದಿಲ್ಲ, ಇಲ್ಲಿ ನಡೆದದ್ದು ಅದೇ! ಆದರೆ ಒಂದು ವಿಧವಾಗಿ ವಸುಧಾಳ ಆಕರ್ಷಕ ರೂಪ, ವ್ಯಕ್ತಿತ್ವ ಮತ್ತು ಗುಣ ಇದಕ್ಕೆ ಕಾರಣ. ಯಾರಿಗಾದರೂ, ಜೀವನ ಸಂಗಾತಿ ಎಂದರೆ ವಸುಧಾ ಅಂತಹವಳು ಸಿಗಬೇಕು ಎನಿಸಿದರೆ ಆಶ್ಚರ್ಯವಿರಲಿಲ್ಲ. ಈ ಅದೃಷ್ಟ ಯಾರಿಗುಂಟು, ಯಾರಿಗಿಲ್ಲ, ಆದರೆ ಇವರಿಬ್ಬರಲ್ಲಿ ವಸು ಯಾರಿಗೆ ಒಲಿಯುತ್ತಾಳೆ ಕಾದುನೋಡಬೇಕು ಎಂದೆಲ್ಲಾ ಇತರರು ಮಾತನಾಡಿಕೊಳ್ಳುತ್ತಿದ್ದರು.



ಕೆಲವು ದಿನಗಳವರೆಗೂ ಆಕಾಶ್ ಮತ್ತು ಆದಿತ್ಯ ಒಳಗೊಳಗೇ ವಸುಧಳನ್ನು ಇಷ್ಟ ಪಡುತ್ತಿದ್ದರೂ ಅವಳಿಗೆ ವಿಷಯ ತಿಳಿಸಿರಲಿಲ್ಲ. ಅವರಿಬ್ಬರೂ ಸಹ ಒಬ್ಬರಿಗೊಬ್ಬರು ಈ ವಿಷಯದ ಬಗ್ಗೆ ಎಂದೂ ಚರ್ಚಿಸಿರಲಿಲ್ಲ. ಅವಳ ಮನೆಯಲ್ಲಿ ಮದುವೆಯ ಪ್ರಸ್ತಾಪ ಶುರುವಾಗುವುದರಲ್ಲಿತ್ತು, ಅದನ್ನು ತಿಳಿದ ಅವರಿಬ್ಬರೂ ಪ್ರತ್ಯೇಕವಾಗಿ ಅವಳಿಗೆ ಅವರವರ ಪ್ರಸ್ತಾಪ ತಿಳಿಸುವ ಯೋಜನೆಯಲ್ಲಿದ್ದರು! ಒಂದೇ ಸಮಯದಲ್ಲಿ ಅಲ್ಲದಿದ್ದರೂ, ಒಂದೇ ದಿನದ ಬೇರೆ ಬೇರೆ ಸಮಯ, ಸಂಧರ್ಭದಲ್ಲಿ ಅವರಿಬ್ಬರೂ ಅವಳಿಗೆ ಅವರವರ ಮನಸ್ಸಿನ ಇಷ್ಟ ತಿಳಿಸಿದ್ದರು. ಹೇಗೆಂದರೆ, ಒಂದು ದಿನ ಆದಿತ್ಯ ಯಾವುದೋ ಕೆಲಸದ ನಿಮಿತ್ತ ಆಫೀಸಿಗೆ ಬೆಳಗಿನ/ಮೊದಲ ಅರ್ಧ ದಿನ ರಜ ಹಾಕಿದ್ದ. ಅದೇ ದಿನ ಆಕಾಶ್ ಮಧ್ಯನ್ನ ಊಟದ ಸಮಯಕ್ಕೆ ಮುಂಚೆ ಅವಳನ್ನು ಭೇಟಿಯಾಗಿ, ತಾನು ಒಬ್ಬಳನ್ನು ಇಷ್ಟ ಪಡುತ್ತಿರುವುದಾಗಿಯು, ಮಧ್ಯನ್ನ ಊಟಕ್ಕೆ ತನ್ನ ಜೊತೆಗೆ ಬಂದರೆ ಅವಳು ಯಾರೆಂದು ತಿಳಿಸುವುದಾಗಿಯೂ, ಅವಳಿಗೆ ಹೇಳಿ ಮತ್ತೆ ಕೆಲಸ ಮಾಡಲು ಹೊರಟುಹೋದ.
ಇತ್ತ ಇವಳು, ಆಕಾಶ್ ಪ್ರೀತಿಸುತ್ತಿದ್ದಾನ? ಇದರ ಬಗ್ಗೆ ಒಂಚೂರು ಸುಳಿವು ಕೊಡದೆ ಈಗ ಇದ್ದಕ್ಕಿದ್ದ ಹಾಗೆ.........., ಯಾರಿರಬಹುದು ಆ ಚೆಲುವೆ, ಅದೃಷ್ಟವಂತೆ ಎಂದು ಯೋಚಿಸುತ್ತಾ, ಸರಿ ನೋಡೋಣ ಊಟಕ್ಕೆ ಹೋದಾಗ ಎಂದುಕೊಂಡು ಗಡಿಯಾರ ನೋಡಿದಳು 12.30 ಆಗಿತ್ತು. ಕೆಲಸ ಮಾಡುತ್ತಿದ್ದರೂ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು.


ಮಧ್ಯಾನ್ನ 1.15 ಕ್ಕೆ ಸರಿಯಾಗಿ ಅಂದುಕೊಂಡಂತೆ ಇಬ್ಬರೂ ಹೊರಟರು. ಹೊರಗೆ ಬಂದು ಆಕಾಶ್ ಬೈಕ್ ಸ್ಟಾರ್ಟ್ ಮಾಡುವುದರಲ್ಲಿದ್ದ, ಅಷ್ಟರಲ್ಲಿ ವಸು ಕೇಳಿದಳು, ಆಕಾಶ್ ನೀನು ಈ ಮುಂಚೆಯೇ ಅವಳಿಗೆ ಪ್ರೀತಿಸುತ್ತಿರುವ ವಿಷಯ ತಿಳಿಸಿದ್ದೀಯ ಅಥವಾ ತಿಳಿಸಬೇಕೋ ಎಂದು. ಅದಕ್ಕವನು ಇಲ್ಲ ಇಲ್ಲ ಈವತ್ತೇ ನಾನವಳಿಗೆ ನನ್ನ ಮನಸ್ಸಿನ ಭಾವನೆ ತಿಳಿಸುವ ಸುದಿನ! ಅದನ್ನು ಅವಳು ಹೇಗೆ ಸ್ವೀಕರಿಸುತ್ತಾಳೋ ಗೊತ್ತಿಲ್ಲಾ, ಒಂದು ರೀತಿ ಆತಂಕ ಆಗುತ್ತಿದೆ ಎಂದು ಹೇಳಿದ. ಆಗ ಅವಳು ಕೆಂಪು ಗುಲಾಬಿಯ ಬೊಕ್ಕೆ ಖರೀದಿಸು, ಮತ್ತು ಹೇಳುವಾಗ ಅದನ್ನು ಜೊತೆಯಲ್ಲಿ ಕೊಡು ಎಂದು ಹೇಳಿ ಅಲ್ಲೇ ಹತ್ತಿರದಲ್ಲಿದ್ದ ಬೊಕ್ಕೆ ಅಂಗಡಿಯ ಕಡೆಗೆ ಸ್ವತಹ ಹೊರಟಳು. ಅವಳು ಹೋದ ಕಡೆಯೇ ಗಮನಿಸುತ್ತಾ ಅವನು, ಅಯ್ಯೋ ಅವಳಿಗೆ ಅವಳೇ ಬೊಕ್ಕೆ ಖರೀದಿಸುತ್ತಿದ್ದಾಳಲ್ಲ, ಎಂತಾ ವಿಪರ್ಯಾಸ! ಏನು ಆಗುತ್ತೋ ಏನೋ ನೋಡೋಣ, ಏನು ಎಡವಟ್ಟು ಆಗದಿದ್ದರೆ ಸರಿ ಎಂದು ತನ್ನ ಮನಸ್ಸಿನೊಂದಿಗೆ ಮಾತಾಡಿಕೊಳ್ಳುತ್ತಾ ಅಂಗಡಿಯ ಕಡೆ ಹೊರಟ. ಹೂಗುಚ್ಛ ತಾನೇ ಕೈಯಲ್ಲಿ ಹಿಡಿದು ಅಂಗಡಿಯಿಂದ ಹೊರ ಬಂದಳು. ಆಕಾಶ್ ಅವಳ ಜೊತೆಯೇ ಬಂದು ಬೈಕ್ ಸ್ಟಾರ್ಟ್ ಮಾಡಿ ಅವಳನ್ನು ಕರೆದುಕೊಂಡು ಹೋದ.

ಪ್ರಸಿದ್ದ ಹೋಟೆಲ್ ಒಂದರ ಒಳ ಹೊಕ್ಕು, ಊಟದ ಟೇಬಲ್ ಕಡೆ ನಡೆಯುತ್ತಿರಲು, ಆಕಾಶ್ 2 ಖುರ್ಚಿ ಇರುವ ಟೇಬಲ್ ಬಳಿ ಹೋಗುತ್ತಿರುವಾಗ ಅವನನ್ನು ಕುರಿತು ವಸುಧಾ ಹೀಗೆಂದಳು, ಯಾಕೆ ಆಕಾಶ್ ನಿನ್ನಾಕೆ ಇನ್ನು ಬಂದಿಲ್ವಾ? ಎರಡೇ ಖುರ್ಚಿ ಇರುವ ಟೇಬಲ್ ಬಳಿ ಕೂರುತ್ತಿದ್ದೀಯಾ, ಆಕೆಯನ್ನು ನಿನ್ನ ಪಕ್ಕದಲ್ಲೇ ಕೂರಿಸಿಕೊಳ್ಳುತ್ತೀಯ, ಈಗ್ಲಿಂದಾನೆ ಎಲ್ಲಾ ಶೆರಿಂಗಾ....... ಎಂದು ಛೇಡಿಸಿದಳು. ಆಗ ಆಕಾಶ್, ಇಲ್ಲ ವಸು ಅದು ಅದು..... ಮತ್ತೆ ಅದು ಎಂದು ತಡವರಿಸುತ್ತಿದ್ದ. ಏನದು ಅಂತ ಸರಿಯಾಗಿ ಹೇಳು ಆಕಾಶ್, ತುಂಬಾ ಸತಾಯಿಸಬೇಡ ನನ್ನ, ನೀನು ಅಂತ ಹೇಳುತ್ತಿರುವಾಗ ಅವನಿಗೆ ಆಶ್ಚರ್ಯ. ಓಹ್.... ಇವಳಿಗೆ ಗೊತ್ತಾಗಿದೆಯ ನಾನು ಇವಳನ್ನೇ ಪ್ರಪೋಸ್ ಮಾಡೋದಕ್ಕೆ ಹೊರಟಿರುವುದು ಅಂತ ಅವಳ ಮುಖವನ್ನೇ ಒಂದು ಕ್ಷಣ ದಿಟ್ಟಿಸಿದ. ಆದರೆ ಅವಳ ಮುಖದಲ್ಲಿ ಕುತೂಹಲದ ಹೊರತು ಬೇರೆ ಯಾವ ಭಾವನೆಯು ಕಾಣಲಿಲ್ಲ! ಇಷ್ಟರಲ್ಲಿ ಅವರಿಬ್ಬರೂ ಖುರ್ಚಿಯಲ್ಲಿ ಕುಳಿತಿದ್ದರು. ಇದೆ ಸರಿಯಾದ ಸಮಯ ಎಂದು ತಿಳಿದು ಆಕಾಶ್ ಗಟ್ಟಿಯಾಗಿ ಕಣ್ಣು ಮುಚ್ಚಿ, ಒಂದೇ ಉಸಿರಿನಲ್ಲಿ ಈ ರೀತಿ ಹೇಳಿಬಿಟ್ಟ! ವಸು ನನ್ನ ಮುಂದೆ ಯಾರು ಕೈಯಲ್ಲಿ ಹೂಗುಚ್ಛ ಹಿಡಿದು ಕುಳಿತಿರುವರೋ, ಆಕೆಯೇ ನಾನು ಇಷ್ಟಪಡುವಾಕೆ, ಅವಳೂ ಇಷ್ಟ ಪಟ್ಟರೆ ಅವಳೇ ನನ್ನಾಕೆ!!
ಅವಳು ಸುತ್ತಲೂ ಕಣ್ಣು ಹಾಯಿಸಿ ನೋಡಿದಳು, ಆ ರೀತಿ ಯಾರೂ ಅಲ್ಲಿರಲಿಲ್ಲ! ಅಷ್ಟರಲ್ಲಿ ಅವಳಿಗೆ ಅದು ತಾನೇ ಎಂದು ಮನವರಿಕೆಯಾದಾಗ, ಆಶ್ಚರ್ಯ ಪಡುವ ಸರದಿ ಅವಳದಾಗಿತ್ತು!!! ಆ ಕ್ಷಣದಲ್ಲಿ ಅವಳಿಗೆ ಏನು ಹೇಳಬೇಕೆಂದು ತೋಚದೆ, ಅವನ ಮುಖವನ್ನೇ ಗಮನಿಸುತ್ತಿದ್ದಳು. ಮುಚ್ಚಿದ್ದ ಕಣ್ಣನ್ನು ನಿಧಾನವಾಗಿ ತೆಗೆಯುತ್ತಾ, ದೀನತೆಯಿಂದ, ಅವಳು ನಿರ್ಲಿಪ್ತವಾಗಿರುವುದನ್ನು ನೋಡಿದನು. ಮತ್ತೆ ವಸು ಏನಾದರೂ ಹೇಳಲು ಬಾಯಿ ತೆರೆಯುವಷ್ಟರಲ್ಲಿ, ಬೇರರ್ ಅಲ್ಲಿಗೆ ಬಂದದ್ದರಿಂದ ಅವಳು ಸಂಧರ್ಭವನ್ನು ಸಂಭಾಳಿಸುತ್ತಾ, ಈಗ ಸಧ್ಯಕ್ಕೆ ಊಟ ಮಾಡೋಣ ಆಕಾಶ್, ಮಿಕ್ಕಿದ್ದು ಆಮೇಲೆ ಮಾತಾಡೋಣ ಎಂದು ಹೇಳಿ ಸುಮ್ಮನಾದಳು. ಆಗ ಅವನೂ ಸಹ ಅದಕ್ಕೆ ಸಮ್ಮತಿಸಿ, ಬೇರರ್ ಗೆ ಊಟ ತರುವಂತೆ ಹೇಳಿ ಕಳುಹಿಸಿದರು. ಊಟ ತರುವ ವರೆಗೂ ಕಾಯಬೇಕಿದ್ದರಿಂದ, ಅವರಿಬ್ಬರೂ ಉತ್ತರ ಧ್ರುವ, ಧಕ್ಷಿನ ಧ್ರುವದಂತೆ ಎದುರುಬದುರು ಕುಳಿತಿದ್ದರೂ ಅವರಿಬ್ಬರ ಮುಖಗಳು ಮಾತ್ರ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಗೆ ತಿರುಗಿದ್ದವು. ಇಬ್ಬರೂ ಯೋಚನೆಯಲ್ಲಿ ಮುಳುಗಿದ್ದರು. ಆಕಾಶ್ ಯೋಚಿಸುತ್ತಿದ್ದ, ವಸು ಗೆ ಇಷ್ಟ ಇದೆಯೋ ಇಲ್ವೋ ಗೊತ್ತಿಲ್ಲ, ಆದರೆ ಯಾವುದೇ ಕಾರಣಕ್ಕೂ ಅವಳು ಕೂಗಾಡಿ ರಂಪ ಮಾಡಲಿಲ್ಲ, ಸಧ್ಯ! ಇದೆ ಗುಣಕ್ಕೆ ಅವಳು ನನಗೆ ತುಂಬಾ ಮೆಚ್ಚುಗೆಯಾಗುವುದು, ಅಂತ.

ಇತ್ತ ವಸು ಇಷ್ಟು ದಿನ ಸ್ನೇಹಿತನಾಗಿದ್ದ ಆಕಾಶ್ ಗೆ ಈಗ ಇದ್ದಕಿದ್ದ ಹಾಗೆ ಈ ಭಾವನೆ ಯಾಕೆ ಬಂತು, ಇದನ್ನು ನಾನು ಸ್ವೀಕರಿಸುವುದೋ, ಬೇಡವೋ ಎಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ಊಟ ಬಂದಿತ್ತು, ಇಬ್ಬರೂ ಏನೂ ಮಾತನಾಡದೆ ಯಾಂತ್ರಿಕವಾಗಿ ಊಟ ಮುಗಿಸಿ ಹೊರಗೆ ಬಂದರು. ಬೇರೆ ಸಮಯದಲ್ಲಾಗಿದ್ದರೆ ಯಾರು, ಯಾರನ್ನೇ ಊಟಕ್ಕೆ ಕರೆದುಕೊಂಡು ಬಂದಿದ್ದರೂ, ಬಿಲ್ ಕೊಡುವಾಗ ನಾನು ನೀನು ಎಂದು ಕಿತ್ತಾಡುತ್ತಿದ್ದರು. ಆದರೆ ಈ ಬಾರಿ ವಸುಧಾ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹೊರಗೆ ಬಂದಿದ್ದಳು!

ಆಫೀಸಿಗೆ ತಿರುಗಿ ಬರುವಷ್ಟರಲ್ಲಿ 2 ಗಂಟೆಯಾಗಿತ್ತು, ಹೂಗುಚ್ಚವನ್ನು ವಸು ಆಫೀಸಿನ ಮುಂಭಾಗದಲ್ಲಿದ್ದ ಗಣೇಶನ ವಿಗ್ರಹದ ಬಳಿ ಇರಿಸಿ ಒಳಗೆ ಹೊರಟಿರುವಾಗ ಅವಳನ್ನು ತಡೆದು ಆಕಾಶ್ ಕೇಳಿದ, ವಸು ನಿನ್ನ ಅಭಿಪ್ರಾಯ ಏನೇ ಇದ್ದರೂ ದಯವಿಟ್ಟು ತಿಳಿಸು ಆದರೆ ಹೀಗೆ ಮೌನವಾಗಿ ಇರಬೇಡ. ಅದಕ್ಕೆ ಉತ್ತರವಾಗಿ ಅವಳು ಏನು ಹೇಳದೆ ಮೌನವಾಗೇ ಒಳ ನಡೆದಿದ್ದಳು. ಅವನೂ ಸಹ ಸಹಜವಾಗಿರಲು ಪ್ರಯತ್ನಿಸುತ್ತಾ ತನ್ನ ಕ್ಯಾಬಿನ್ ಒಳಗೆ ಸೇರಿಕೊಂಡ. ಅಷ್ಟರಲ್ಲಿ ಆದಿತ್ಯ ಸಹ ಆಫೀಸಿಗೆ ಬಂದಿದ್ದ, ಅವನು ತುಂಬಾ ಖುಷಿಯಾಗಿದ್ದ! ಸಹೋದ್ಯೋಗಿಯೊಬ್ಬರಿಂದ ಇವರಿಬ್ಬರೂ ಹೋಟೇಲ್ಗೆ ಊಟಕ್ಕೆ ಹೋಗಿದ್ದುದು ತಿಳಿದು, ಅದು ಅವರ ಮಧ್ಯ ಮಾಮೂಲು ಆಗಿದ್ದುದರಿಂದ, ಬೇರೆ ವಿಷಯ ಅವನಿಗೆ ಇನ್ನೂ ತಿಳಿದಿಲ್ಲವಾದ್ದರಿಂದ ಆದಿ ಹೆಚ್ಚಿಗೆ ತಲೆ ಬಿಸಿ ಮಾಡಿಕೊಳ್ಳಲಿಲ್ಲ. ಬದಲಿಗೆ ಆದಿ ಈ ರೀತಿ ಯೋಚಿಸುತ್ತಾ, ವಸು ನೀನು ನನಗೊಲಿದರೆ ನಾನು ನಿನ್ನನ್ನು ಈ ರೀತಿ ಮಿಸ್ ಮಾಡಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ನನ್ನ ಮನಸ್ಸಿನ ಆಸೆಯನ್ನು ಈ ದಿನವೇ ನಾನು ನಿನ್ನ ಮುಂದೆ ಬಿಚ್ಚಿಡುತ್ತೇನೆ, ಈವತ್ತು ನಿನಗೊಂದು ಆಶ್ಚರ್ಯ ಕಾದಿದೆ ನೋಡು! ಎಂದು ಮನದಲ್ಲೇ ಲೆಕ್ಕಾಚಾರ ಮಾಡುತ್ತಾ ಹಾಡೊಂದನ್ನು ಗುನುಗುನಿಸುತ್ತಿದ್ದ. ಮತ್ತು ಅವಳನ್ನು ಸಂಜೆ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಮೂಡುವ ಆಶ್ಚರ್ಯದ ವಾತಾವರಣ ಊಹಿಸಿ ಒಳಗೊಳಗೇ ಸಂಭ್ರಮಿಸುತ್ತಾ ಕೆಲಸ ಮಾಡುತ್ತಿದ್ದ. ವಸುಧಾ ಆದಿಯನ್ನು ಈ ದಿನ ಇನ್ನು ಮಾತನಾಡಿಸಿರಲಿಲ್ಲವಾದ್ದರಿಂದ, ಅವನಿಗೆ ಮಧ್ಯಾನ್ನ ನಡೆದ ವಿಷಯ ತಿಳಿಸಿ, ಅವನ ಪ್ರತಿಕ್ರಿಯೆ ಏನೆಂದು ತಿಳಿದುಕೊಳ್ಳೋಣ ಎಂದು ಆದಿತ್ಯನ ಕ್ಯಾಬಿನ್ನಿಗೆ ಬಂದಳು. ಹಲೋ ಆದಿ..... ಎಂದು ವಸುಧಾ ಏನಾದರೂ ಕೇಳುವಷ್ಟರಲ್ಲಿ, ಆದಿತ್ಯ ಅವಳು ಬಂದದ್ದನ್ನು ಗಮನಿಸಿ ಮಾತನಾಡಲು ಶುರು ಮಾಡಿದನು. ಹಾಯ್ ವಸು ನಿನ್ನನ್ನೇ ನೆನಪಿಸಿಕೊಳ್ಳುತ್ತಿದ್ದೆ! ನಿಂಗೊತ್ತಾ ನಾನಿವತ್ತು ಬೆಳಿಗ್ಗೆ ಒಂದು ಸಮಾರಂಭಕ್ಕೆ ಹೋಗಿದ್ದೆ, ಅಲ್ಲಿ ನನ್ನ, ಅಮ್ಮನ ಹತ್ರ ಯಾರೋ ಪ್ರಪೋಸ್ ಮಾಡಿದ್ದಾರಂತೆ. ಅವರನ್ನು ಅಮ್ಮ ಸಂಜೆ ಮನೆಗೆ ಕರೆದಿದ್ದಾರೆ, ನೀನೂ ನನ್ನ ಜೊತೆ ನಮ್ಮನೆಗೆ ಬರ್ತಾ ಇದ್ದೀಯ ಅಷ್ಟೇ..... , ಮತ್ತೇನೂ ಸಬೂಬು ಹೇಳಬೇಡ. ಏನೇ ಹೇಳುವುದಿದ್ದರೂ ಸಂಜೆ ಮನೆಗೆ ಬಂದಾಗ ಹೇಳುವಿಯಂತೆ ಎಂದು ಅವಳಿಗೆ ಮಾತಾಡಲು ಅವಕಾಶ ನೀಡದೆ ಒಂದೇ ಸಮನೆ ಹೇಳಿದ, (ಅಸಲು ವಿಷಯ ಮುಚ್ಚಿಟ್ಟು)! ಸರಿ ವಸುಧಾ ಸಹ ಅವನ ಸಂತೋಷವನ್ನು ನೋಡಿ ಏನೂ ಹೇಳಲಾಗದೆ ಎದ್ದು ನಿಂತಳು. ಅಷ್ಟರಲ್ಲಿ ಸರಿಯಾಗಿ ಬಾಸ್ ಸಹ ಅವಳಿಗೆ ಬರುವಂತೆ ಹೇಳಿ ಕಳುಹಿಸಿದ್ದರಿಂದ, ತಕ್ಷಣ ಹೊರಗೆ ಬಂದಳು.

ಸಂಜೆ ಆರೂವರೆ ಹೊತ್ತಿಗೆ ಆದಿತ್ಯ ವಸುಧಾಳನ್ನು ಮನೆಗೆ ಕರೆದುಕೊಂಡು ಹೋದ. ಅವಳು ಅವನ ಮನೆಗೆ ಈ ಮುಂಚೆ ಎಷ್ಟೋ ಸಲ ಬಂದಿದ್ದರಿಂದ ಸೀದಾ ಆದಿಯ ತಾಯಿಯನ್ನು ಹುಡುಕುತ್ತಾ ಒಳಗೆ ಹೋದಳು. ಅಲ್ಲಿ ಒಬ್ಬರಿಗೊಬ್ಬರು ಕ್ಷೇಮ ಸಮಾಚಾರ ವಿಚಾರಿಸಿ, ಸ್ವಲ್ಪ ಹೊತ್ತಿನ ನಂತರ ಹಾಲ್ ನಲ್ಲಿ ಬಂದು ಕುಳಿತರು. ಇಲ್ಲಿ ಆದಿಗೆ ಒಂದು ಕಡೆ ಸಂಭ್ರಮ, ಒಂದು ಕಡೆ ತಳಮಳ. ಅವನೂ ಒಂದು ಫೋಟೋವನ್ನು ಜೇಬಿನಲ್ಲಿರಿಸಿಕೊಂಡು ರೂಂನಿಂದ ಹೊರಗೆ ಬಂದ. ಆಂಟಿ ಮನೆಗೆ ಬರುವವರು ಹೆಣ್ಣಿನ ಕಡೆಯವರ ಅಥವಾ ಮಧ್ಯವರ್ತಿಗಳ? ಎಷ್ಟು ಹೊತ್ತಿಗೆ ಬರುತ್ತಾರೆ, ಹುಡುಗಿಯನ್ನು ಕರೆತರುತ್ತಾರ ಅಥವಾ ನಾವೆಲ್ಲಾ ಅವರ ಮನೆಗೆ ಹೋಗಬೇಕಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದ ವಸುಧಾಳನ್ನು, ಆದಿತ್ಯ ಅವನ ತಾಯಿ ಮತ್ತು ತಂದೆ ಒಮ್ಮೆ ಅವಳನ್ನೇ ನೋಡಿ ನಂತರ ಅವರುಗಳು ಒಬ್ಬರಿಗೊಬ್ಬರು ಮುಖ ನೋಡಿಕೊಂಡರು! ಇದನ್ನು ಗಮನಿಸಿದ ವಸುಧಾ ಅವರುಗಳ ಮುಖವನ್ನೇ ಆಶ್ಚರ್ಯ ಚಕಿತಳಾಗಿ ನೋಡುತ್ತಿದ್ದಳು! ಆಗ ಆದಿತ್ಯ ತನ್ನ ಜೇಬಿನಲ್ಲಿದ್ದ ಫೋಟೋ ತೆಗೆದು ಅವಳ ಮುಂದೆ ಹಿಡಿಯುತ್ತಾ, ವಸು ಇವಳೇ ನನ್ನ ಮನ ಮೆಚ್ಚಿದ ಹುಡುಗಿ! ಇವಳ ಒಪ್ಪಿಗೆಯೂ ಸಿಕ್ಕರೆ ನಾ ಆಗುವೆನು ಸಂಸಾರಿ, ಇಲ್ಲವಾದರೆ ಉಳಿಯುವೆನು ನಾನು ಬ್ರಹ್ಮಚಾರಿಯಾಗಿ ಎಂದು ಪ್ರಾಸಬದ್ಧವಾಗಿ ಹೇಳುತ್ತಿರುವಂತೆ ಅವಳು ಫೋಟೋವನ್ನು ಗಮನಿಸಿದಳು. ನೋಡಿದರೆ ಏನಾಶ್ಚರ್ಯ!! ಅದು ಅವಳ ಭಾವಚಿತ್ರವೇ ಆಗಿತ್ತು!!! ಕೆಲವು ನಿಮಿಷಗಳ ಮೌನ ಆವರಿಸಿತ್ತು ಅಲ್ಲಿ. ಇವಳ ಅಭಿಪ್ರಾಯ ಏನಿರಬಹುದು ಎನ್ನುವ ತವಕ ಅವರುಗಳಿಗಾದರೆ ಇವಳಿಗೆ ಒಂದು ವಿದವಾದ ವಿಚಿತ್ರ ಸ್ಥಿತಿ! ನಂತರ ಅವಳೇ ಮೌನ ಮುರಿದು ಮಾತನಾಡಿದಳು ಏನಿದೆಲ್ಲಾ ಆದಿ? ಅಲ್ಲಾ ಏನಾಗಿದೆ ನಿಮ್ಮಿಬ್ಬರಿಗೂ? ಅಲ್ಲಿ ನೋಡಿದರೆ ಆಕಾಶ್ ಇಂದು ಮಧ್ಯಾನ್ನ ನನಗೆ ಪ್ರಪೋಸ್ ಮಾಡಿದ್ದ, ಈಗ ನೋಡಿದರೆ ನೀನು! ನೀವಿಬ್ಬರೂ ಯಾವಾಗ ಹೀಗೆ ಬದಲಾದಿರಿ? ನಮ್ಮ ಗೆಳೆತನಕ್ಕೆ ಅರ್ಥವೇನು? ಎಂದೆಲ್ಲ ಕೇಳುತ್ತಿದ್ದಾಗ ಶಾಕ್ ಆಗುವ ಸರದಿ ಅವರುಗಳದಾಗಿತ್ತು!


ಏನೂ, ಆಕಾಶ್ ನಿನಗೆ ಪ್ರಪೋಸ್ ಮಾಡಿದನೆ? ಮತ್ತೆ ನೀನಿದನ್ನು ಮುಂಚೆಯೇ ಯಾಕೆ ನನಗೆ ಹೇಳಲಿಲ್ಲ ವಸು. ಮತ್ತೆ ನಾವು ಸಹ ಈ ವಿಚಾರದ ಬಗ್ಗೆ, ನಿನ್ನ ಮೇಲಿನ ನಮ್ಮ ಭಾವನೆಗಳ ಬಗ್ಗೆ ಒಬ್ಬರಿಗೊಬ್ಬರು ಹೇಳಿಕೊಂಡಿರಲಿಲ್ಲ! ಈಗ ಇದೆಂತಹ ಪರೀಕ್ಷೆ, ಎಂತಹ ಸಂಧರ್ಭ ಬಂತು ನಮ್ಮಗಳಿಗೆ?! ಎಂದು ಚಿಂತಿತನಾದ. ಇವರಿಬ್ಬರ ಮಾತುಗಳನ್ನು ಕೇಳಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆದಿಯ ತಂದೆ, ತಾಯಿ ವಸುಧಾಳಿಗೆ ಈ ರೀತಿ ಹೇಳಿದರು. ನೋಡಮ್ಮ ವಸು ನೀವು ಮೂರು ಜನ ತುಂಬಾ ಒಳ್ಳೆಯ ಸ್ನೇಹಿತರೆಂದು ನಮಗೆಲ್ಲ ಗೊತ್ತಿರುವ ವಿಷಯವೇ ಆದರೆ ಈಗ ನಿನಗೆ ಬಂದಿರುವಂತಹ ಪರಿಸ್ಥಿತಿ ತುಂಬಾ ಸೂಕ್ಷ್ಮ ಮತ್ತು ಗಂಬೀರವಾದುದು. ನೀನು ನಮ್ಮ ಮನೆಗೆ ಸೊಸೆಯಾಗಿ ಬರಲು ಒಪ್ಪುತ್ತೀಯೆಂದು ನಂಬಿ ನಾವೆಲ್ಲಾ ತುಂಬಾ ಸಂತೋಷವಾಗಿದ್ದೆವು, ಇದೆ ವಿಷಯಕ್ಕೆ ಆದಿ ಬೆಳಗ್ಗಿನಿಂದ ತಯಾರಿ ಮಾಡಿಕೊಂಡಿದ್ದ! ಆದರೆ ವಿಷಯ ಹೀಗಿರುವಾಗ ನಾವು ಯಾರೂ ನಿನ್ನ ಮೇಲೆ ಒತ್ತಡ ಹೇರುವುದು ಸರಿಯಲ್ಲ. ನೀನು ಆಕಾಶನನ್ನು ಬಿಟ್ಟು ನನ್ನ ಮಗನನ್ನೇ ಒಪ್ಪಿಕೊ ಎಂದು ಹೇಳಲು ನಮಗೆ ಯಾವ ಅಧಿಕಾರವೂ ಇಲ್ಲ, ಅಲ್ಲದೆ ಆಕಾಶ್ ಮೇಲೆ ನಮಗೆ ಯಾವುದೇ ದ್ವೇಷ ಇಲ್ಲ. ಅವನೂ ಸಹ ನಮ್ಮ ಮಗನಿದ್ದ ಹಾಗೆ!! ಎಂದು ಹೇಳುತ್ತಿರಲು ಎಲ್ಲರೂ ಒಂದು ರೀತಿಯ ಭಾವಾನಾತ್ಮಕ ಸೆರೆಯಲ್ಲಿ ಬಂಧಿಯಾದರು!!! ಮಾತು ಮುಂದುವರೆಸುತ್ತಾ ಅವರು ಮತ್ತೆ ಹೇಳಿದರು, ವಸುಧಾ ನೀನು ವಿಚಾರವಂತಳು, ಬುದ್ದಿವಂತಳು. ನೀನು ಜೀವನದಲ್ಲಿ ಯಾರಾದರೊಬ್ಬರನ್ನು ಮದುವೆಯಾಗಲೇಬೇಕು, ಆ ಯಾರೋ ಒಬ್ಬರು, ಇವರಿಬ್ಬರಲ್ಲಿಯೇ ಒಬ್ಬರಾದರೆ ನಮಗೆ ತುಂಬಾ ಸಂತೋಷ! ಯಾಕೆಂದರೆ ನಿನ್ನಂತಹ ಅಪರೂಪದ, ಅಮೂಲ್ಯವಾದಂತಹ ಹುಡುಗಿ ಸಿಗಬೇಕಾದರೆ ಅದು ನಮ್ಮ ಅದೃಷ್ಟವೇ ಸರಿ! ಇದು ಹೊಗಳಿಕೆಯಷ್ಟೇ ಅಲ್ಲ ವಾಸ್ತವ ಕೂಡ. ಮುಂದಿನ ನಿರ್ಧಾರ ನಿನಗೇ ಬಿಟ್ಟಿದ್ದು ಎಂದು ಹೇಳಿ ತಮ್ಮ ಮಗನ ಕಡೆ ನೋಡಿದರು. ಅವನು ಏನೂ ಹೇಳಲು ತೋಚದೆ ಗಂಬೀರವಾದ ಆಲೋಚನೆಯಲ್ಲಿ ಮುಳುಗಿಹೋಗಿದ್ದ. ಆಗ ವಸುಧಾ ಹೇಳಿದಳು, ಈ ವಿಷಯವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ನನಗೆ ಸಮಯ ಬೇಕು, ಮತ್ತು ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ನಿಮ್ಮೆಲ್ಲರ ಸಹಕಾರ ನನಗಿದೆ ಎಂದು ನಂಬುತ್ತೇನೆ ಎಂದು ಹೇಳುತ್ತಾ ಮೂವರನ್ನು ಒಮ್ಮೆ ನೋಡಿದಳು. ನಂತರ ಸರಿ ನಾನಿನ್ನು ಹೋಗಿಬರುತ್ತೇನೆ ಎಂದು ಹೇಳಿ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಳು.











6 comments:

ಶಿವಪ್ರಕಾಶ್ said...

SSK ಅವರೇ,
ತುಂಬಾ ಚನ್ನಾಗಿದೆ.
ಆದ್ರೆ, ಕೊನೆಯಲ್ಲಿ ಅವಳ ಉತ್ತರ ಇಲ್ಲದೆ ಮುಗಿಸಿಬಿಟ್ಟಿರಿ. :(
ಒಳ್ಳೆಯ ಲೇಖನ.

SSK said...

ಶಿವಪ್ರಕಾಶ್ ಅವರೇ, ತಾಂತ್ರಿಕ ತೊಂದರೆಯಿಂದ ಮುಂದುವರಿದ ಭಾಗ ಇದರ ಜೊತೆ ಪೋಸ್ಟ್ ಮಾಡಲಾಗಲಿಲ್ಲ. ಅದನ್ನು ಮುಂದಿನ ಭಾಗದಲ್ಲಿ ಹಾಕುತ್ತೇನೆ, ದಯವಿಟ್ಟು ನಿರೀಕ್ಷಿಸಿ.
ಕಥೆ ಮೆಚ್ಚಿದ್ದಕ್ಕೆ ಧನ್ಯವಾದಗಳು! ಹೀಗೆ ಭೇಟಿ ನೀಡುತ್ತಿರಿ.

Prabhuraj Moogi said...

ಪ್ರೇಮ ಕಥೆ ಬಹಳ ಚೆನ್ನಾಗಿತ್ತು, ನೀವು ಪಾತ್ರಗಳಿಗೆ ಆರಿಸುವ ಹೆಸರುಗಳು ಬಹಳ ಚೆನ್ನಾಗಿರುತ್ತವೆ... ವಸುಧಾಳಿಗೆ ಬಹಳ ಕನ್ಫ್ಯೂಜನ್ ಆಗಿರಬಹುದು ಇಬ್ಬರೂ ಬೇಡ ಅಂತ ಹೇಳಿ ನನ್ನ ನಂಬರು ಕೊಟ್ಟು ಬಿಡಿ ಎಲ್ಲ ಪ್ರಾಬ್ಲಂ ಸಾಲ್ವ ಆಗತ್ತೆ (ಸುಮ್ನೆ ತಮಾಷೆಗೆ)...

SSK said...

ಪ್ರಭು ಅವರೇ, ಕಥೆ ಮೆಚ್ಚಿದ್ದಕ್ಕೆ ಮತ್ತು ನಿಮ್ಮ ಹೊಗಳಿಕೆಗೆ ಧನ್ಯವಾದಗಳು! ಇದರ ಎರಡನೇ / ಕೊನೆ ಭಾಗ ಮುಂದೆ ಪೋಸ್ಟ್ ಮಾಡುತ್ತೇನೆ. ದಯವಿಟ್ಟು ನಿರೀಕ್ಷಿಸಿ! (ನೀವು ಪೂರ್ತಿ ಕಥೆ ಓದಿದ ಮೇಲೆ ನಾನು ನಂಬರ್ ಕೊಡುತ್ತೇನೆ, ಆಯಿತಾ?)

ushasanthu said...

ssk sir ಕತೆ ತುಂಬ ಚೆನ್ನಾಗಿದೆ ಆದರೆ ವಸುಂದರ ಅವರಿಬ್ಬರಲ್ಲಿ ಯಾರನ್ನು ಇಷ್ಟ ಪಡುತ್ತಾಳೆ ಅನ್ನೋದು ಕುತೂಹಲಕಾರಿ ವಿಷಯ ದಯವಿಟ್ಟು ಇದರ ಮುಂದಿನ ಭಾಗ publish ಮಾಡಿ
ಇಲ್ಲ ಅಂದರೆ ವಸುಂದರಗೆ ನನ್ ದೂರವಾಣಿ ನಂಬರ್ ಕೊಡಿ

Unknown said...

ಸರ್ ನಿಜಕ್ಕು ಇಂತದ್ದೆ ನನ್ನ ಜಿವನದಲ್ಲಿ ಆಗಿ ಹೊಗಿದೆ ವಸು ಅವರ ನಿರ್ದಾರ ಬೆಗ ತಿಳಿಸಿ
ನಾ...........ಉತ್ತರಕ್ಕಾಗಿ ಕಾಯಿತಿರುವೆ?