Thursday, April 16, 2009

ಮನಸ್ಸಿನ ಚಿಂತನ, ಮಂಥನ..!

ಗೆಳೆಯರೇ, ನನಗಾದ ಅನುಭವ ಮತ್ತು ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ವಿಚಾರದಲ್ಲಿ ತಪ್ಪೇನಾದರೂ ಇದ್ದರೆ ಮನ್ನಿಸಿ!



ಕಳೆದ ಗುರುವಾರ ನಾನು ಬೆಳಗ್ಗೆಯಿಂದ ಮನೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಇದರ ಮಧ್ಯೆ ತಿಂಡಿ, ಅಡುಗೆ ಎಲ್ಲ ಮುಗಿಸುವಷ್ಟು ಹೊತ್ತಿಗೆ ಮಧ್ಯಾನ್ನವಾಗಿತ್ತು ಮತ್ತು ಕಸ ಗುಡಿಸಿ, ಒರೆಸುವ/ಸಾರಿಸುವ ಕೆಲಸ ಬಾಕಿ ಇತ್ತು. ಸರಿ ಊಟವಾದ ಮೇಲೆ ಮಾಡಿ ಮುಗಿಸಿಬಿಡೋಣ ಎಂದು ಊಟದ ಶಾಸ್ತ್ರ ಮುಗಿಸಿದೆ. ಆದರೆ ಊಟವಾದ ನಂತರ ತಕ್ಷಣ ಕೆಲಸ ಶುರು ಮಾಡಲು ಮನಸು ಬರಲಿಲ್ಲ ಬದಲಿಗೆ ಸ್ವಲ್ಪ ಹೊತ್ತು ಮಲಗಿ ಸುಧಾರಿಸಿಕೊಳ್ಳುವಂತೆ ಮನಸು ಪೀಡಿಸುತ್ತಿತ್ತು. ಮಹ್ಯಾನ್ಹದಲ್ಲಿ ಮಲಗುವ ಅಭ್ಯಾಸ ಇಲ್ಲದಿರುವುದರಿಂದ ಸಾಮಾನ್ಯವಾಗಿ ಮಲಗುವುದಿಲ್ಲ. ಹಾಗೆ ಮಲಗಿದರು ನಿದ್ರೆ ಮಾತ್ರ ಮಾಡುವುದಿಲ್ಲ! ಆದರೆ ಸುಸ್ತಾಗಿದ್ದರಿಂದಲೋ ಏನೋ ಕಣ್ಣು ಜೋಂಪು ಹತ್ತುತ್ತಿತ್ತು. ಸಂಜೆ ಬೇರೆ ಎಲ್ಲೋ ಅವಶ್ಯವಾಗಿ ಹೋಗಬೇಕಾಗಿದ್ದುದರಿಂದ, ಈಗ ಸ್ವಲ್ಪ ಹೊತ್ತು ಮಲಗದಿದ್ದರೆ ಆಮೇಲೆ ಕೆಲಸ ಕೆಡುತ್ತದೆ, ಹೋದ ಕಡೆ ಕಣ್ಣು ಎಳೆಯುತ್ತಿರುತ್ತವೆ ಎಂದು ಜಾಸ್ತಿ ಕೊಸರಾಡದೆ ಮಲಗಿಬಿಟ್ಟೆ! ೨ ಘಂಟೆಗಳ ಕಾಲ ಎಚ್ಚರವೇ ಇಲ್ಲ ಅಂತಾ ನಿದ್ರೆ. ಕಣ್ಣು ಬಿಟ್ಟಾಗ ಗಡಿಯಾರ ೫.೦೦ ಘಂಟೆ ತೋರಿಸುತ್ತಿತ್ತು. ಗಡಬಡಿಸಿ ಎದ್ದು ಮತ್ತೆ ಮಿಕ್ಕ ಕೆಲಸ ಮಾಡಿ ಮುಗಿಸೋಣ ಎಂದರೆ ಒಂದು ರೀತಿ ಪಾಪ ಪ್ರಜ್ಞೆಯಿಂದ, ಇಷ್ಟು ಹೊತ್ತು ಮಲಗಿದ್ದು ತಪ್ಪು ಎನ್ನುವಂತೆ ನನ್ನನ್ನು ಕಾಡಿಸಿ ಸ್ವಲ್ಪ ಹೊತ್ತು ಸುಮ್ಮನೆ ಕೂರುವಂತೆ ಮಾಡಿತು ನನ್ನ (ಕಳ್ಳ) ಮನಸ್ಸು! ನಿಧಾನವಾಗಿ ಕೆಲಸ ಮುಗಿಸಿ, ತಯಾರಾಗಿ ಹೊರಟೆ.

ರಾತ್ರಿ ಬರುವಷ್ಟರಲ್ಲಿ ೧೦.೦೦ ಘಂಟೆಯಾಗಿತ್ತು, ಮತ್ತು ಅಲ್ಲಿ ಚಾಟ್ ತಿಂದಿದ್ದರಿಂದ ಮನೆಯಲ್ಲಿ ಊಟ ಮಾಡಲು ಅರ್ಧಂಬರ್ಧ ಮನಸು ತಿನ್ನಲೋ, ಬೇಡವೋ ಎಂದು. ಈಗ ತಿನ್ನದೇ ಇದ್ದರೆ ಬೆಳಗ್ಗೆ ತಿಂಡಿ ತಿನ್ನುವವರೆಗೂ ಹಾಗೆ ಇರಲು ಆಗುವುದಿಲ್ಲ, ಎಷ್ಟು ಸೇರುತ್ತೋ ಅಷ್ಟು ತಿಂದು ಮಲಗೋಣ ಎಂದುಕೊಂಡೆ.


ಈ ಮೇಲಿನ ಕಥೆ ಎಲ್ಲಾ ಬರಿ ಪೀಠಿಕೆ ಅಷ್ಟೇ! ಆದರೆ ಅಸಲಿ ಕಥೆ ಮುಂದೆ ಓದಿ!!



ತಟ್ಟೆಯಲ್ಲಿ ಅನ್ನ, ಸಾರು ಬಡಿಸಿಕೊಂಡು ಬಂದು ಸೋಫಾದಲ್ಲಿ ಕುಳಿತು ತಿನ್ನಲು ಶುರು ಮಾಡಿದೆ. ಇನ್ನ ಒಂದು ತುತ್ತು ಬಾಯಿಗೆ ಇಡಲಿಲ್ಲ, ಅಷ್ಟರಲ್ಲೇ ಒಂದೆರಡು ಅನ್ನದ ಅಗಳು ನೆಲಕ್ಕೆ ಚೆಲ್ಲಿತು. ಸಾಮಾನ್ಯವಾಗಿ ನಾನು ತುಂಬಾ ತಾಳ್ಮೆಯಿಂದ ಇರುತ್ತೇನೆ! ಆದರೆ ಸ್ವಲ್ಪ ಹೊತ್ತಿನ ಮುಂಚೆಯೇ ಸಾರಿಸಿ ಸ್ವಚ್ಛ ಮಾಡಿದ್ದರಿಂದ ಅನ್ನ ಚೆಲ್ಲಿದ್ದಕ್ಕೆ ಕೋಪ ಬಂದು ಬೈದುಕೊಂಡೆ. ಛೆ ಸ್ವಲ್ಪ ಹೊತ್ತು ಕೂಡ ಶುದ್ದವಾಗಿರೋಲ್ಲ ಏನಾದರೊಂದು ಚೆಲ್ಲುತ್ತಲೇ ಇರುತ್ತೆ ಎಂದುಕೊಂಡು ತಿನ್ನಲು ಮುಂದುವರೆಸಿದೆ. ಎರಡು ತುತ್ತು ತಿಂದಿದ್ದೆ ಅಷ್ಟೇ, ನಾನು ಬೈದುಕೊಂಡಿದ್ದಕ್ಕೆ ತಕ್ಷಣ ನನ್ನ ಮನಸ್ಸು ನನ್ನನ್ನು ತಿರಸ್ಕರಿಸುತ್ತಾ, ಯಾವುದೋ ಅಶರೀರ ವಾಣಿಯೊಂದು ನುಡಿದಂತೆ ನನ್ನ ೬ ನೇ ಸ್ಮೃತಿ ಜಾಗೃತಗೊಳಿಸಿತು. ಅದೇನೆಂದರೆ ಆದದ್ದಿಷ್ಟೇ, ಭೂಮಿ ತಾಯಿಯು ನನ್ನನ್ನು ಕುರಿತು, ನಾನೇ ಕೊಡುವ ಆಹಾರದಲ್ಲಿ ಏನೋ ಒಂದು ಸ್ವಲ್ಪ ಪ್ರೀತಿಯಿಂದ ನಿನ್ನಿಂದ ತೆಗೆದುಕೊಂಡೆ ಅಷ್ಟಕ್ಕೆ ಹೀಗೆ ಬೈದುಕೊಳ್ಳುವುದಾ? ಎಂದು ನನ್ನನ್ನು ಮೂದಲಿಸುವಂತೆ ಭಾಸವಾಯಿತು!!!
ಅಷ್ಟೇ, ನನ್ನ ತಪ್ಪಿನ ಅರಿವು ನನಗಾಗಿತ್ತು. ಆಗ ನಾನಂದುಕೊಂಡೆ, ಹೌದಲ್ಲವಾ! ಮತ್ತು ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನೆಲದ ಮೇಲೆ ಕುಳಿತು ಚೊಕ್ಕವಾಗಿ ಬಾಳೆಎಲೆ ಅಥವಾ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಊಟ ಶುರು ಮಾಡುವ ಮುಂಚೆ ಮೊದಲ ತುತ್ತನ್ನು ತಮ್ಮ ಇಷ್ಟ ದೇವರಿಗೆ ಅಥವಾ ಪಿತೃ ದೇವತೆಗಳಿಗೆ ಅಥವಾ ಭೂಮಿ ತಾಯಿಗೆ ಸಮರ್ಪಿಸಿ ನಂತರ ತಿನ್ನುತ್ತಿದ್ದರು. (ಆಗ ಮೇಜು ಖುರ್ಚಿಗಳು ಅಷ್ಟಾಗಿ ಇರುತ್ತಿರಲಿಲ್ಲ). ಈ ಪದ್ದತಿಯೆಲ್ಲ ಈಗ ಎಲ್ಲಿದೆ? ಎಲ್ಲೋ, ಹೇಗೋ, ಏನೋ ತಿಂದು ತಮ್ಮ ತಮ್ಮ ಕೆಲಸದಲ್ಲಿ ವ್ಯಸ್ತರಾಗಿಬಿಡುತ್ತಾರೆ. ಈಗಿನ ಪೀಳಿಗ್ಹೆಯವರಿಗೆ ಅಷ್ಟು ಸಂಸ್ಕಾರ, ವ್ಯವಧಾನ ಎಲ್ಲಿದೆ? ನಾವು ಮಧ್ಯ ಪೀಳಿಘೆಯವರು ಮೊದಲ ತುತ್ತು ತಿನ್ನುವ ಮೊದಲು ದೇವರನ್ನು ನೆನೆದು/ ಮುಗಿದು ತಿಂದರೂ ಅದು ಕೇವಲ ಲೋಕಾ ರೂಢಿಯಾಗಿದೆ ಅಷ್ಟೇ!





Tuesday, April 14, 2009

ಹೈಜಾಕ್........!

ನೆನಪಿನ ಬುತ್ತಿಯಿಂದ........!



ಕೆಲವು ವರ್ಷಗಳ ಹಿಂದೆ ವಿಮಾನವೊಂದು ಹೈಜಾಕ್ (ಅಪಹರಣ) ಆಗಿದ್ದುದು ನಿಮಗೆಲ್ಲ ನೆನಪಿರಬಹುದು. ನನಗೆ ಯಾವ ವರ್ಷ ಎಂದು ಸರಿಯಾಗಿ ನೆನಪಾಗುತ್ತಿಲ್ಲ. ಇರಲಿ ನಾನು ನಿಮಗೆ ತಿಳಿಸ ಹೊರಟಿರುವ ವಿಷಯವೇನೆಂದರೆ, ಆ ಘಟನೆ ನಡೆದಾದ ನಂತರದ ದಿನಗಳಲ್ಲಿ ಅಂದರೆ ಎಲ್ಲವೂ ತಿಳಿಯಾಗಿ, ಮತ್ತು ಜನರೂ ಸ್ವಲ್ಪ ಸ್ವಲ್ಪವಾಗಿ ಮರೆಯುತ್ತಿದ್ದಂತ ಸಂಧರ್ಭ. ಆ ಸಮಯದಲ್ಲಿ ನಾನು ಕೆಲಸ ಮಾಡುತ್ತಿದ್ದಲ್ಲಿ ಈ ರೀತಿಯ ಒಂದು ಪ್ರಸಂಗ ನಡೆದಿತ್ತು. ಅದನ್ನು ಈಗ ನಿಮ್ಮೊಂದಿಗೆ ನಾನು ಹಂಚಿಕೊಳ್ಳುತ್ತಿದ್ದೇನೆ!


ನಾನು ಆಗ ನೇತ್ರಾಲಯ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಅಲ್ಲಿನ ಸಹೋದ್ಯೋಗಿಗಳ ಪೈಕಿ ನನ್ನ ಗೆಳತಿ, ಸಹಪಾಟಿಯು ಆದ ಹೇಮಾ ಕೂಡ ಒಬ್ಬಳು! ಇವಳು ತೆಳ್ಳಗೆ, ಬೆಳ್ಳಗೆ ಸುಂದರವಾಗಿದ್ದರೂ ಕೋಪ ಮಾತ್ರ ಮೂಗಿನ ತುದಿಯಲ್ಲೇ ಇರುತ್ತಿತ್ತು. ಮಾಡುವ ಕೆಲಸದಲ್ಲೂ ಗಡಿಬಿಡಿ ಮತ್ತು ಅವಸರ ಇರುತ್ತಿತ್ತು. ಇಂತಹ ಇವಳಿಗೆ ಯಾರಾದರು ಜೋಕ್ ಮಾಡಿದರೆ ಹೇಗಿರುತ್ತೆ ಹೇಳಿ!? ಇವಳು ನಗುವ ಸಂಧರ್ಭ ಇದ್ದಾಗ ನಗದೇ ಏನು ಇರುತ್ತಿರಲಿಲ್ಲ ಆದರೆ ಕೆಲಸ ಮಾಡುವಾಗ ಅವಳು ಆಕಾಶವನ್ನೇ ತನ್ನ ತಲೆಯ ಮೇಲೆ ಹೊತ್ತು ಕೊಂಡಿರುವ ಹಾಗೆ ಆಡುತ್ತಿದ್ದಳು. ಅಲ್ಲಿ ನಾವು ಪ್ರತಿಯೊಬ್ಬರೂ, ಎಲ್ಲಾ ರೀತಿಯ ಕೆಲಸವನ್ನು ಮಾಡಬೇಕಾಗುತ್ತಿತ್ತು, ಇಂತಹ ಅವರಿಗೆ ಇಂತಹುದೇ ಕೆಲಸ ಎಂಬ ನಿಯಮವೇನೂ ಇರಲಿಲ್ಲ. ಆದ್ದರಿಂದ ಪರಸ್ಪರ ಸಹಾಯ ಮಾಡುವ ಅವಕಾಶಗಳು ಇರುತ್ತಿದ್ದವು. ಇವೆಲ್ಲದರ ಮಧ್ಯೆ ಕೆಲಸದ ಒತ್ತಡ ಇದ್ದಾಗ ಒಬ್ಬರಿಗೊಬ್ಬರು ರೇಗುವುದು , ಸಹಜವಾಗಿದ್ದಾಗ ರೇಗಿಸುವುದು, ಮುನಿಸು, ಕೋಪ, ನಗು, ಸಂತೋಷ ಮುಂತಾದುವು ಸಿಬ್ಬಂದಿ ವರ್ಗದಲ್ಲಿ ಸಹಜ ತಾನೆ!


ನಾವುಗಳು ಅಲ್ಲಿ ಬರುತ್ತಿದ್ದ ಎಲ್ಲ ಪೇಷಂಟ್ ಗಳಿಗೂ (ಹೊಸದಾಗಿ ಮತ್ತು ಪುನರಾವರ್ತಿಯಾಗಿ ಬರುವ ಎಲ್ಲಾರಿಗೂ ) ಮೊದಲು ಗಣಕೀಕೃತ ಯಂತ್ರದಿಂದ ಅವರ ಕಣ್ಣಿನ ಪರೀಕ್ಷೆ ಮಾಡಿ ಅದರ ವಿವರವಿರುವ ಸ್ಲಿಪ್ ಅನ್ನು ಪೇಷಂಟ್ ನ ಚೀಟಿಯಲ್ಲಿ (ಪ್ರೆಸ್ಕ್ರಿಪ್ಶನ್) ಪಿನ್ ಮಾಡಿ ಮುಂದಿನ ಚಿಕಿತ್ಸೆಗೆ ಕಳುಹಿಸಿಕೊಡಬೇಕು. ಹೀಗೆ ಇದರಲ್ಲಿ ಪರೀಕ್ಷಿಸುವ ಮುಂಚೆ ಅವರುಗಳಿಗೆ ವಿವರಿಸಬೇಕಾಗಿತ್ತು, ಅದೇನೆಂದರೆ ಆ ಮೆಶಿನ್ ಒಳಗೆ ಕಾಣುವ ಒಂದು ಚಿತ್ರದ ತುದಿಯನ್ನು ದೃಷ್ಟಿಸಿ ನೋಡುವಂತೆ ಮತ್ತು ರೀಡಿಂಗ್ ಮಾಡುವಾಗ ಅತ್ತಿತ್ತ ಅಲುಗಾಡದೆ ಮತ್ತು ಮಾತಾಡದೆ ಇರುವಂತೆ ಹೇಳುತ್ತಿದ್ದೆವು.


ಹೀಗಿದ್ದಾಗ ಒಮ್ಮೆ ಮೊದಲ ಸಲ ಬಂದಿದ್ದ ನಡು ವಯಸ್ಸಿನ ವ್ಯಕ್ತಿಯೊಬ್ಬರಿಗೆ ಹೇಮಾ ಆ ಮೆಶಿನ್ ನಲ್ಲಿ ರೀಡಿಂಗ್ ಚೆಕ್ ಮಾಡುತ್ತಿದ್ದಳು. ಅದೇ ಸಮಯಕ್ಕೆ ನಾನು ಆಪರೇಷನ್ ಮಾಡಿಸಿ ಕೊಳ್ಳ ಬೇಕಿದ್ದ ಪೇಷಂಟ್ ಒಬ್ಬರಿಗೆ ಆಪರೇಷನ್ ನ ನಿಯಮಗಳನ್ನು ಮತ್ತು ಸೂಚನೆಗಳನ್ನು ತಿಳಿಸಿದ ನಂತರ ಡಾಕ್ಟರ್ ಹೇಳಿಕೆಯ ಮೇಲೆ ಅವರಿಗೆ ಮತ್ತೆ ರೀಡಿಂಗ್ ಚೆಕ್ ಮಾಡಿಸಲು ಆ ಮೆಶಿನ್ ಬಳಿ ಬರಲು ಹೇಳಿ ನಾನು ಅಲ್ಲಿಗೆ ತಲುಪಿದೆ. ಅಲ್ಲಿ ಹೇಮಾ ಆ ಪೇಷಂಟ್ ಗೆ ಎಲ್ಲ ಸೂಚನೆಗಳನ್ನು ಎಂದಿನಂತೆ ಗಡಿಬಿಡಿಯಲ್ಲಿ ವಿವರಿಸಿ ಅವರಿಗೆ ಮುಖವನ್ನು ಮುಂದೆ ಆನಿಸಿ ಒಳಗಿರುವ ಚಿತ್ರವನ್ನು ನೋಡುವಂತೆ ಹೇಳುತ್ತಿದ್ದಳು . (ಓಹ್ ..ಸಾರೀ ನಿಮಗೆ ನಾನು ಅದರೊಳಗಿರುವ ಚಿತ್ರ ಯಾವುದೆಂದು ತಿಳಿಸಿಲ್ಲ ಅಲ್ಲವೇ ? ಅದೇ ಅದು ಏರೋಪ್ಲೇನ್ ಚಿತ್ರ . ಅದೊಂದೇ ಚಿತ್ರ ಅದರೊಳಗೆ ಇದ್ದದ್ದು.)


ಆ ವ್ಯಕ್ತಿ ಅವಳು ಹೇಳಿದಂತೆಯೇ ಮಾಡಿ, ತಕ್ಷಣ ಹಿಂದಕ್ಕೆ ಬಂದುಬಿಟ್ಟರು (ಕೆಲವು ಮಂದಿ ಹೊಸಬರು, ನಾವು ಹೇಳಿದ್ದುದು ಅರ್ಥವಾಗಿಲ್ಲದಿದ್ದರೆ ಹೀಗೆ ಮಾಡುತ್ತಿದ್ದರು. ಮತ್ತೆ ಅವರಿಗೆ ವಿವರಿಸಿ ರೀಡಿಂಗ್ ಚೆಕ್ ಮಾಡುತ್ತಿದ್ದೆವು.) ಆಗ ಅವಳಿಗೆ ತಕ್ಷಣ ಕೋಪ ಬಂದು ಮುಖ ಕೆಂಪಾಯಿತು! ಆದರೆ ನಮಗೆಲ್ಲ ಎಷ್ಟೇ ಕೋಪ ಬೇಸರ ಇದ್ದರು, ಪೇಷಂಟ್ಗಳನ್ನೂ ನಿಂದಿಸುವ ಹಾಗಿರಲಿಲ್ಲ. ಆದ್ದರಿಂದ ಹೇಮಾ ನಾನು ಅಲ್ಲೇ ಹತ್ತಿರ ಇದ್ದುದರಿಂದ ಸಹಾಯ ಯಾಚಿಸಿದಳು ಅದೂ ಕಣ್ಣಲ್ಲೇ, ನನಗೆ ಅರ್ಥವಾಗಿತ್ತು. ನಾನು ಆ ವ್ಯಕ್ತಿಯ ತಲೆ ಮೆಶಿನ್ ಗೆ ಆನಿಸಿ ರೀಡಿಂಗ್ ಆಗುವವರೆಗೂ ಅಲ್ಲಾಡದಂತೆ/ ಹಿಂದಕ್ಕೆ ಬರದಂತೆ ಅವರ ತಲೆಯನ್ನು ಒತ್ತಿ ಹಿಡಿದುಕೊಳ್ಳುವುದರಲ್ಲಿದ್ದೆ! ಅಷ್ಟರಲ್ಲಿ ಅವರು ಮಾತನಾಡುತ್ತಾ, ಎಲ್ಲಮ್ಮಾ ನನಗೆ ಯಾವ ಏರೋಪ್ಲೇನ್ ಕಾಣಿಸುತ್ತಿಲ್ಲ... ಎಂದು ಹೇಳುತ್ತಿರುವಾಗ ಹೇಮಾ ಅದಕ್ಕೆ ಉತ್ತರವಾಗಿ, ಸಾರ್ ಅಲ್ಲೇ ಸರಿಯಾಗಿ ನೋಡಿ ಮತ್ತೊಮ್ಮೆ....... ಎಂದು ಹೇಳಿ ಮುಗಿಸುವಷ್ಟರಲ್ಲಿ ಆ ವ್ಯಕ್ತಿ ಮತ್ತೆ ಹೇಳಿದರು, ಬಹುಷಃ ಹೈಜಾಕ್ ಆಗಿರಬಹುದು!!!!!! ಅನ್ನುತ್ತಾ ತುಂಟ ನಗೆ ನಕ್ಕರು. ನಮ್ಮಿಬ್ಬರಿಗೆ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಒಂದೆರಡು ಸೆಕೆಂಡ್ ಆಗಿತ್ತು. ಆಗ ಒಂದರೆಕ್ಷಣ ಅವಳ ಬೇಸ್ತು ಬಿದ್ದ ಮುಖವನ್ನು ನೋಡಬೇಕಾಗಿತ್ತು! ಮತ್ತು ಅರ್ಥವಾದಾಗ ನಾವಿಬ್ಬರೂ ನಕ್ಕಿದ್ದೆ ನಕ್ಕಿದ್ದು !!!ಮತ್ತೆ ನಾವಿಬ್ಬರೂ ನಗುವ ಮುಂಚೆ ಗಲಿಬಿಲಿ ಗೊಂಡಿದ್ದನ್ನು ಗಮನಿಸಿದ ಆ ವ್ಯಕ್ತಿ ಹೀಗೆ ಹೇಳಿದರು, ನೀವೆಲ್ಲಾ ಕೆಲಸದಲ್ಲಿ ವ್ಯಸ್ಥವಾಗಿರುತ್ತೀರಿ, ಅದಕ್ಕೆ ನಿಮ್ಮನ್ನು ನಗಿಸೋಣ ಎಂದು ಹಾಗೆ ಜೋಕ್ ಮಾಡಿದೆ ಅಷ್ಟೇ, ತಪ್ಪಾಗಿ ತಿಳಿಯಬೇಡಿ ಎಂದರು. ಅದಕ್ಕೆ ನಾವು ಪರವಾಗಿಲ್ಲ ಸಾರ್ ಎಂದು ಒಟ್ಟಿಗೆ ನುಡಿದಿದ್ದೆವು. ಅಷ್ಟೇ ಅಲ್ಲ ಈ ಪ್ರಸಂಗವನ್ನು ಬೇರೆ ಕೊಲಿಗ್ ಗಳಿಗೂ ಹೇಳಿ ಮತ್ತಷ್ಟು ನಕ್ಕಿದ್ದೆವು.......!!!

ನಿಜವಾದ ವಿಮಾನ ಅಪಹರಣ ಆದ ಸುದ್ದಿ ಕೇಳಿದಾಗ ವ್ಯಥೆಯಾಗಿದ್ದುದು ಎಷ್ಟು ನಿಜವೋ, ಚಿತ್ರದಲ್ಲಿರುವ ಏರೋಪ್ಲೇನ್ ಅನ್ನು ಹೈಜಾಕ್ ಮಾಡಿಸಿದ ಆ ವ್ಯಕ್ತಿಯ ಹಾಸ್ಯ ಪ್ರಜ್ಞೆಗೆ ನಮಗೆ ನಗು ಬಂದದ್ದು ಅಷ್ಟೇ ಸಹಜ!


ಇದೆ ರೀತಿ ಇನ್ನಷ್ಟು ಪ್ರಸಂಗಗಳನ್ನು ಮುಂದೆ ಮುಂದೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ಆದರೆ ಒಂದು ಮಾತು, ಇವನ್ನೆಲ್ಲ ಓದುವ ನಿಮಗೆ ನಗು ಬರದಿದ್ದರೆ ನಾನು ಜವಾಬ್ಧಾರಳಲ್ಲ!!






Thursday, April 9, 2009

ನಿಂಗಿಯ ಪುರಾಣ....!

ಈ ಪುಟ್ಟ ಕಥೆ ಕೇವಲ ನನ್ನ ಕಲ್ಪನೆಯದ್ದು ! ಯಾವುದಾದರು ಹೋಲಿಕೆ ಇದ್ದರೆ ಅದು ಕೇವಲ ಆಕಸ್ಮಿಕ ಅಷ್ಟೆ!



ನಗರದಲ್ಲಿ ಒಂದು ಪುಟ್ಟ ಸುಂದರ ಕುಟುಂಬ . ಕುಟುಂಬದ ಸದಸ್ಯರು ನಾಲ್ಕು ಮಂದಿ, ಅವರುಗಳು ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು! ಸ್ವಂತ ಮನೆ, ಅವಶ್ಯಕತೆ ಇದ್ದ ಎಲ್ಲಾ ವಸ್ತುಗಳು, ಮನೆಯ ಸುತ್ತ ಒಂದು ಪುಟ್ಟ ತೋಟ ಎಲ್ಲವೂ ಇದ್ದಂತ ಅನುಕೂಲವಾದ ಸಂಸಾರ ಅವರದು. ಅವರ ಮನೆಯಲ್ಲಿ ಕೆಲಸ ಮಾಡುವ ಆಕೆಯೇ ನಿಂಗಿ! ಈಕೆಯ ಗಂಡ ರಂಗ. ಇವರಿಬ್ಬರ ಪುಟ್ಟ ಮಗಳು ಭಿತ್ರಿ ಅಲ್ಲ ಛತ್ರಿ ಅದು ಅಲ್ಲ, ಯಾರಿಗ್ಗೊತ್ರಿ? ಸುಮ್ಮನೆ ತಮಾಷೆ ಮಾಡಿದೆ ಅವಳ ಹೆಸರು ಚಿತ್ರ.

ಬಹಳ ನಂಬಿಕಸ್ಥ ಕುಟುಂಬ ಈ ನಿಂಗಿಯದು! ಕೆಲಸಕ್ಕೆ ಮೋಸ ಮಾಡಿದರೂ ಮಾತಿಗೆ ಮತ್ತು ಹೊಟ್ಟೆಗೆ ಎಂದೂ ಮೋಸ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಹೇಳದೆ ಕೇಳದೆ ಯಾವುದೇ ವಸ್ತುವನ್ನು ಮುಟ್ಟುವುದಾಗಲೀ, ಮಾಯಾ ಮಾಡುವುದಾಗಲಿ ಮಾಡುತ್ತಿರಲಿಲ್ಲ ಮೊದಲೇ ಹೇಳಿದಂತೆ ನಂಬಿಕಸ್ಥಳು. ಅವರಾಗೆ ಏನಾದರು ಕೊಟ್ಟರೆ ತೆಗೆದುಕೊಳ್ಳುತ್ತಿದ್ದಳು ಇಲ್ಲದಿದ್ದರೆ ಏನು ಬೇಕಿದ್ದರೂ ಸಂಕೋಚ ವಿಲ್ಲದೆ ಕೇಳುತ್ತಿದ್ದಳು. ಹೇಳುವ ಎಲ್ಲ ಕೆಲಸವನ್ನು ಚಾಚು ತಪ್ಪದೆ ಚೆನ್ನಾಗಿಯೇ ಮಾಡುತ್ತಿದ್ದಳು, ಆದರೆ ಬಟ್ಟೆ ಒಗೆಯುವ ಕೆಲಸ ಬಂದಾಗ ಮಾತ್ರ ಇವಳಿಗೆ ಎಲ್ಲಿಲ್ಲದ ಮಾಯಾವಿ ನೋವುಗಳು ಬಂದುಬಿಡುತ್ತಿದ್ದವು! ಬಟ್ಟೆ ಒಗೆಯುವ ಮೆಶಿನ್ ಇದ್ದರೂ ಸಂಧರ್ಭಕ್ಕೆ ತಕ್ಕಂತೆ ಕೆಲವೊಮ್ಮೆ ಮೆಶಿನ್ ನಲ್ಲಿ ಅಥವಾ ತುಂಬಾ ಕೊಳೆ ಇರುವ ಬಟ್ಟೆ ಗಳಾದರೆ ನಿಂಗಿಯ ಕೈಯಿಂದ ಒಗೆಸುತ್ತಿದ್ದರು.



ಎಲ್ಲಾ ಕೆಲಸಗಳನ್ನು ಚೆನ್ನಾಗೇ ಮಾಡುವ ನಿಂಗಿ ಬಟ್ಟೆ ಮಾತ್ರ ಯಾಕೆ ಚೆನ್ನಾಗಿ ಒಗೆಯುವುದಿಲ್ಲ, ಎನ್ನುವ ವಿಷಯ ಮನೆಯ ಒಡತಿಗೆ ರಹಸ್ಯವಾಗೆ ಉಳಿದಿತ್ತು. ಎಷ್ಟೋ ಸಲ ಅವಳನ್ನೇ ಕೇಳಿದ್ದರು ಕೂಡ! ಅಲ್ವೇ ನಿಂಗಿ.... ಹೇಳೋ ಎಲ್ಲ ಕೆಲಸಾನೂ ಚಾಚು ತಪ್ಪದೆ ಚನ್ನಾಗೆ ಮಾಡೋ ನೀನು, ಬಟ್ಟೆಗಳು ಒಗೆಯೋ ಕೆಲಸ ಮಾತ್ರ ಯಾಕೆ ನ್ಯಾಯವಾಗಿ ಮಾಡೊಲ್ಲ ಎಂದು ಕೇಳುತ್ತಿದ್ದ ಮನೆಯಾಕೆಯ ಪ್ರಶ್ನೆಗೆ ನಿಂಗಿಯ ಉತ್ತರ ತಲೆ ಕೆರೆದುಕೊಳ್ಳುತ್ತಾ ಹಲ್ಲು ಗಿಂಜುವುದು ಅಷ್ಟೆ! ಆದರೆ ಒಂದು ದಿನ ಈ ರಹಸ್ಯವೂ ಬಯಲಾಯಿತು ಅನ್ನಿ. ಅದು ಹೇಗೆಂದರೆ, ಮುಂದೆ ಓದಿ ....



ಅದೊಂದು ದಿನ ಅವಳು ದಿನದ ಕೆಲಸ ಮುಗಿಸಿ, ಎಲೆ ಅಡಿಕೆ ಮೆಲ್ಲುತ್ತಾ ಸಂಜೆ ಮನೆಗೆ ಹೊರಟಿದ್ದಳು. ಅವಳನ್ನು ಆ ಮನೆಯ ಯಜಮಾನ ಕರೆದು, ಏ ನಿಂಗಿ ಈ ಭಾನುವಾರ ನಿನ್ನ ಗಂಡನನ್ನು ಜೊತೆಗೆ ಕರೆದುಕೊಂಡು ಬಾ ತೋಟದಲ್ಲಿ ಸ್ವಲ್ಪ ಕೆಲಸ ಮಾಡೋದಿದೆ ಎಂದು ಹೇಳಿದ್ದಕ್ಕೆ ಸರಿ ಎನ್ನುವಂತೆ ತಲೆಯಾಡಿಸಿ ಮನೆಗೆ ಹೋದಳು .

ಆ ದಿನ ಭಾನುವಾರ ಯಜಮಾನರು ಹೇಳಿದ ಹಾಗೆ ಗಂಡನನ್ನು ಜೊತೆಯಲ್ಲಿಯೇ ಕರೆದುಕೊಂಡು ಬಂದಳು. ಹೊರಗೆ ದಿನಪತ್ರಿಕೆ ಓದುತ್ತ ಕುಳಿತಿದ್ದ ಯಜಮಾನನ ಮುಂದೆ ನಿಂತು, ಸೊಂಟದಲ್ಲಿ ಕಟ್ಟಿದ್ದ ಟವೆಲ್ ಬಿಚ್ಚಿ ಎರಡೂ ಕೈಗಳ ಮಧ್ಯೆ ಮುದುರಿಕೊಂಡು ನಮಸ್ಕಾರ ಬುದ್ದೀ... ಅಂತ ಕೈ ಜೋಡಿಸಿ ನಿಂತ ರಂಗ. ನಿಂಗಿನೂ ಹಲ್ಲು ಕಿರಿದು ಒಳಗೆ ಹೋದಳು. ಇತ್ತ ಮನೆಯೊಡೆಯ ರಂಗನಿಗೆ ಏನೇನು ಕೆಲಸ ಮಾಡಬೇಕು ಎಂದು ತಿಳಿಸುತ್ತಾ, ಮೊದಲು ಉದುರಿದ ಎಲೆ ಮತ್ತು ಕಸ, ಕಡ್ಡಿಗಳನ್ನು ಗುಡಿಸಿ ಸ್ವಚ್ಛ ಮಾಡು ಮಿಕ್ಕಿದ್ದು ಆಮೇಲೆ ಎಂದು ಹೇಳಿದ್ದಕ್ಕೆ ಸರಿ ಎನ್ನುವಂತೆ ತಲೆ ಆಡಿಸಿ ಆ ಕಡೆ ಹೊರಟ. ಇತ್ತ ಈ ಯಜಮಾನ ತೆರೆದಿದ್ದ ದಿನಪತ್ರಿಕೆ ಕಣ್ಣ ಮುಂದಿದ್ದರು ಅದನ್ನು ಮತ್ತೆ ಓದುವ ಗೋಜಿಗೆ ಹೋಗದೆ, ಅವನು ಹೋದ ಕಡೆಯೇ ಗಮನಿಸುತ್ತಿದ್ದರು.

ಮಂಡಿಯ ವರೆಗೂ ಇದ್ದ ಬಿಳಿ ಕಚ್ಚೆ ಪಂಚೆ ಮೇಲೆ ನಸುಗೆಂಪು ಬಣ್ಣದ ಅಂಗಿ (ಶರ್ಟ್ ) ತೊಟ್ಟಿದ್ದ ರಂಗ. ವಸ್ತ್ರವನ್ನು (ಟವೆಲ್) ತಲೆಗೆ ಸುತ್ತಿಕೊಂಡು ಅಂಗಿ ಬಿಚ್ಚಿ ಒಂದು ಪಕ್ಕಕ್ಕಿಟ್ಟು ಕೆಲಸಕ್ಕೆ ಅಣಿಯಾಗುತ್ತಿದ್ದ. ಅಷ್ಟರಲ್ಲಿ ಮನೆಯೊಡತಿ ಒಂದು ಟ್ರೇನಲ್ಲಿ ಕಾಫೀ ಮತ್ತು ಎರಡು ಕಪ್ಪುಗಳನ್ನು ಜೋಡಿಸಿಕೊಂಡು ಬಂದು ಪತಿಯ ಬಳಿ ಕೂರುತ್ತಾ ಕಪ್ಪಿಗೆ ಕಾಫಿ ತುಂಬಿಸುತ್ತಿದ್ದರು. ನಂತರ ಪತಿಯ ಕೈಗೆ ಒಂದು ಕಪ್ಪನ್ನಿರಿಸಿ, ತಾವೂ ಕಾಫಿ ಕುಡಿಯುತ್ತಾ ಅವರೂ ರಂಗನ ಕಡೆ ದೃಷ್ಟಿ ಹಾಯಿಸಿದರು. ನೋಡಿದರೆ ಆಶ್ಚರ್ಯ, ರಂಗನ ಕಪ್ಪು ಬಣ್ಣದ ಮೈ ಮೇಲೆ ಹೊಸದರಂತೆ ಕಾಣುವ ಶುಭ್ರ ಬಿಳುಪಿನ ಕಚ್ಚೆ ಪಂಚೆ ಮತ್ತು ಬನಿಯನ್! ಈ ಬಟ್ಟೆಗಳನ್ನು ನಾವೇ ತಾನೆ ಇವರಿಗೆ ಕೊಟ್ಟಿದ್ದು ಎಂದು ತಿಳಿದುಕೊಳ್ಳಲು ಆಕೆಗೆ ಹೆಚ್ಚಿನ ಸಮಯ ಹಿಡಿಸಲಿಲ್ಲಾ. ಯಾಕೆಂದರೆ ಆ ಬನಿಯನ್ ಮಗ ತೊಡುತ್ತಿದ್ದ ಮಾಮುಲಿಗಿಂತ ಸ್ವಲ್ಪ ವಿಶಿಷ್ಟವಾದ ಶೈಲಿಯದು. ಕಾಫಿ ಕುಡಿದ ನಂತರ, ಕಪ್ಪುಗಳನ್ನು ತೊಳೆಯಲು ತೆಗೆದುಕೊಂಡು ಹೋಗುವಂತೆ ಹೇಳಿ ನಿಂಗಿಯನ್ನು ಕರೆದರು.



ಐದು ನಿಮಿಷ ಬಿಟ್ಟು, ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಬಂದ ನಿಂಗಿಯನ್ನು ಆಕೆ ಕೇಳಿದರು. ಏನೇ ನಿಂಗಿ ನಿಮ್ಮ ಮನೇಲಿ ಕೆಲಸಕ್ಕೆ ಅಂತ ಯಾರನ್ನಾದರು ನೇಮಿಸಿ ಕೊಂಡಿದ್ದಿಯೇನೆ? ಅದಕ್ಕೆ ನಿಂಗಿ ಇಲ್ಲ್ರವ್ವಾ , ನಾವೇನೆ ಒಂದು ಮನೇಲಿ ಕೆಲಸ ಮಾಡಿ ದುಡಿಯೋರು ಅಂತದ್ರಾಗೆ ನಮ್ಮನೆಯಾಗ್ ಯಾವ ಕೆಲ್ಸದೊರ್ ನೀವೇ ಹೇಳಿ . ಹಾಗಾದ್ರೆ ನಿನ್ನ ಗಂಡಾನೆ ಬಟ್ಟೆ ಒಗಿತಾನ, ಯಾಕೆಂದ್ರೆ ಬೆಳಗ್ಗೆಯಿಂದ ಸಂಜೆ ತನಕ ನೀನು ಇಲ್ಲೇ ಇರ್ತೀಯಲ್ಲ . ಐ ಬುಡಿ ಅಮ್ಮಾವ್ರೇ ಆ ಮೂದೇವಿಗೆ ಆ ಕೆಲಸ ಎಲ್ ಮಾಡೋಕ್ಕೆ ಬರುತ್ತೆ , ಇಲ್ಲಿಂದ ಹೋದ್ಮ್ಯಾಲೆ ನಾನ್ ಅಲ್ಲಿನೂ ದುಡಿಬ್ಯಾಕು, ಏನೋ ಒಸಿ ಸಹಾಯ ಮಾಡ್ತಾನೆ ಅಷ್ಟೇಯ.

ಹೇಗಾದರೂ ಮಾಡಿ ಈವತ್ತು ಅವಳ ಬಾಯಿ ಬಿಡಿಸ ಬೇಕು ಅಂದುಕೊಂಡು ಅವಳನ್ನು ಈಕೆ ಇನ್ನಷ್ಟು ಪ್ರಶ್ನಿಸಿದರು.

ಹಾಗಾದ್ರೆ ನಿನ್ ಗಂಡನ ಹುಟ್ಟಿದ ಹಬ್ಬಾನ ಅಥವಾ ನೀವ್ ಮದ್ವೆ ಆದ ದಿನಾನ ಈವತ್ತು , ಯಾಕೆಂದ್ರೆ ರಂಗ ಮಿಂಚ್ತಾ ಇದಾನೆ ಈವತ್ತು ಏನ್ ವಿಷ್ಯಾ ? ಅಂತವೆಲ್ಲ ನಮ್ಮಂತೋರಿಗೆ ಎಲ್ಲ ಏನ್ ವಿಶೇಷ ಇಲ್ಲ ಅಮ್ಮೊರೆ , ಅವ್ನು ಆಕೊಂಡ್ ಇರೋ ಬಟ್ಟೆ ನೀವ್ ಕೊಟ್ಟಿದ್ದೆ ಅಲ್ಲುವ್ರ . ಇದ್ನೋಡಿ ನಾನ್ ಉತ್ಕೊಂಡ್ ಇರೋ ಈ ಅರಿಸಿನ ಬಣ್ಣದ ಸೀರೆನು ನೀವೇ ಕೊಟ್ಟಿದ್ದು ! ನಾವ್ ಇಲ್ ಬಿಟ್ರೆ ಬೇರೆ ಎಲ್ ಕೆಲಸ ಮಾಡ್ತಿವಿ ಏಳಿ , ಏನೇ ಕೊಟ್ರು ನೀವೇ ಅಲ್ವ ಕೊಡ್ಬೇಕು.

ಅದು ಸರಿ ಆದರೆ ನಮ್ಮ ಮನೇಲಿ ನೀನೆ ಬಟ್ಟೆ ಒಗೆಯೋದು, ಅದರಲ್ಲಿ ಸರಿಯಾಗಿ ಕೊಳೆ ನೆ ಹೋಗ್ಸೋದಿಲ್ಲಾ ಆದ್ರೆ ನಿಮ್ಮನೇಲಿ ನೀನೆ ಒಗೆಯೋ ಬಟ್ಟೆ ಅಷ್ಟು ಶುಭ್ರವಾಗಿದೆ ಹೇಗೆ? ಅಂತ ಕೇಳಿದ್ದಕ್ಕೆ ನಿಂಗಿ ಅದೇ ರೀತಿ ಹಲ್ಲು ಕಿರಿಯುತ್ತಾ ..... ನಿಮ್ಮನ್ತೊರ್ ಹೊಟ್ಟೆಗೆ, ಬಟ್ಟೆಗೆ ಕೊಟ್ರೆನೆ ಅಲ್ವ ಅಮ್ಮೊರೆ ನಮ್ಮನ್ತೋರ ಜೀವನ ಸಾಗೋದು !?

ಇವಳ ಮಾತಿನ ಒಳ ಅರ್ಥ ತಿಳಿದ ಮನೆಯೊಡತಿಗೂ, ಇವರಿಬ್ಬರ ಮಾತನ್ನು ಕೇಳುತ್ತಿದ್ದ ಯಜಮಾನನಿಗು ಬೆಸ್ತೋ , ಬೇಸ್ತು !