Friday, July 24, 2009

ಮದುವೆ ಕರೆಯೋಲೆ.....!

ಇದು ನನ್ನ ತುಂಟ ಮನಸಿನ, ಕಾಲ್ಪನಿಕ ಸನ್ನಿವೇಶ ಅಷ್ಟೇ. ನಿಮಗೆ ಇಷ್ಟವಾದಲ್ಲಿ ಮೆಚ್ಚಿ, ಇಲ್ಲವಾದರೂ ತಿಳಿಸಿ ಬಿಡಿ,ಹಾಗೆ ಸುಮ್ಮನೆ .......!

ಆಷಾಡ ಕಳೆದು ಶ್ರಾವಣ ಮಾಸ ಬಂದಿತು! ಇನ್ನೇನು ಮದುವೆ ಕಾಲ, ಸಂಭ್ರಮ ಮತ್ತು ಸಡಗರ, ಜೊತೆಗೆ ಸಾಲಾಗಿ ಹಬ್ಬಗಳು ಬೇರೆ ಬರುತ್ತವೆ. ಯಾರ ಮದುವೆ ಇರಬಹುದಪ್ಪಾ, ಆಹ್ವಾನ ಪತ್ರಿಕೆ ಕಳಿಸುತ್ತಿದ್ದಾರೆ ಅಂದುಕೊಂಡಿರಾ? ಖಂಡಿತ ಮದುವೆ ನನ್ನದಂತೂ ಅಲ್ಲ!!! ಇನ್ಯಾರದು ಅಂತ ತಿಳಿದು ಕೊಳ್ಳುವ ತವಕಾನಾ? ಯಾಕಷ್ಟು ಅವಸರ ನಿಧಾನವಾಗಿ, ನೆಮ್ಮದಿಯಾಗಿ ಲಗ್ನಪತ್ರಿಕೆ ಓದಿ ಮತ್ತು ನೀವೆಲ್ಲರೂ ಈ ಸಂತೋಷ ಸಮಾರಂಭದಲ್ಲಿ ಭಾಗಿಯಾಗಿ.

ಅಂದ ಹಾಗೆ ಸುಮ್ಮನೆ ವಧು ವರರ ಹೆಸರು ಮತ್ತು ಮದುವೆ ಸ್ಥಳ ಮಾತ್ರ ಓದಿ ಸುಮ್ಮನಾಗಬೇಡಿ! ಒಂದು ಅಕ್ಷರವೂ ಬಿಡದೆ ಪೂರ್ತಿ ಓದಿಬಿಡಿ ಆಗ ನಿಮಗೆ ಅನಿಸಿದ್ದು ನನಗೆ ತಿಳಿಸಿ .

ಯಾವುದೇ ಸಮಾರಂಭವಿರಲಿ ಅಲ್ಲಿ ಸಿಹಿ ತಿನಿಸು ಇಲ್ಲದಿದ್ದರೆ ಹೇಗೆ? ಅದು ಅಪೂರ್ಣ ಆಗುವುದಿಲ್ಲವೇ?
ಹೌದು, ಯಾವುದೇ ಆಚರಣೆ ಇರಲಿ ಅಲ್ಲಿ ಸಿಹಿ ತಿಂಡಿ ಇರಲೇ ಬೇಕು. ಆದರೆ ಈ ಸಿಹಿಗಳೇ ಮದುವೆ ಸಂಭ್ರಮ ನಡೆಸಿಕೊಂಡರೆ ಹೇಗಿರುತ್ತೆ......?!

ಮುಂದೆ ಓದಿ......



ಶುಭ ವಿವಾಹ


ಶ್ರೀ ಕೊಬ್ಬರಿ ಮಿಠಾಯಿ ಸ್ವಾಮಿ ಪ್ರಸನ್ನ!!!


ಸಕ್ಕರೆ ಜಿಲ್ಲೆಯ, ಗೋಡಂಬಿ ತಾಲೂಕು, ದ್ರಾಕ್ಷಿ ಹೋಬಳಿ, ಕಡ್ಲೆ ಹಿಟ್ಟು ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಬೂಂದಿ ರಾವ್
ಮತ್ತು
ಮೈದಾ ಹಿಟ್ಟು ಜಿಲ್ಲೆಯ, ಬಾದಾಮಿ ತಾಲೂಕು, ಕ್ಷೀರ ಹೋಬಳಿ, ರವೆ ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಚಿರೋಟಿ ರಾವ್

ಸ್ವಸ್ತಿಶ್ರೀ ಕೇಸರಿ ಬಾತ್ ನಾಮ ಸಂವತ್ಸರ ದಿನಾಂಕ 46 / 83 / 2896 ರಂದು
ಮಧ್ಯರಾತ್ರಿ 33 ಘಂಟೆ 30 ನಿಮಿಷದಲ್ಲಿ "ಕ್ಯಾರೆಟ್ ಹಲ್ವ ಲಗ್ನದಲ್ಲಿ ನಡೆಯುವ "

ಚಿ ಸೌ ಜಿಲೇಬಿ ದೇವಿ
(ಶ್ರೀಮತಿ ಶ್ರೀ ಬೂಂದಿ ರಾವ್ ಅವರ ಜ್ಯೇಷ್ಠ ಪುತ್ರಿ)
ಮತ್ತು
ಚಿ ರಾ ಜಾಮೂನ್ ರಾವ್
(ಶ್ರೀಮತಿ ಶ್ರೀ ಚಿರೋಟಿ ರಾವ್ ಅವರ ಜ್ಯೇಷ್ಠ ಪುತ್ರ)

ಇವರ ವಿವಾಹ ಮಹೋತ್ಸವವನ್ನು, ಮೈಸೂರ್ ಪಾಕ ನಗರದಲ್ಲಿ ಇರುವ ಲಾಡು ಬಡಾವಣೆಯ ಧೂದ್ ಪೇಢ ಛತ್ರದಲ್ಲಿ ನಡೆಯುವಂತೆ, ಬಾಧೂಷರವರು ಮತ್ತು ಚಂಪಾಕಲಿಯವರು ಜೊತೆಗೆ ಇನ್ನೂ ಅನೇಕ ಸಿಹಿಗಳು ನಿಶ್ಚಯಿಸಿರುವುದರಿಂದ, ತಾವುಗಳು ತಮ್ಮ ಪರಿವಾರ ಸಮೇತ ಮದುವೇ ಛತ್ರಕ್ಕೆ ಬಂದು ಊಟಮಾಡಿ ಕೈ ತೊಳೆದುಕೊಂಡು, ವಧು ವರರನ್ನು ಆಶೀರ್ವದಿಸಬೇಕೆಂದು ಕೋರುವವರು, ಶ್ರೀ ಬೂಂದಿ ರಾವ್ ಮತ್ತು ಶ್ರೀ ಚಿರೋಟಿ ರಾವ್

ತಮ್ಮ ಸುಖ ಆಗಮನವನ್ನು ಬಯಸುವವರು:

ಬರ್ಫಿ, ಹಾಲುಖೋವ ಮತ್ತು ಮುಂತಾದ ಸಿಹಿ ಮಿತ್ರರು.......!!!!!


ಮುಖ್ಯ ಸೂಚನೆ:ತಮ್ಮ ಉಡುಗೊರೆಗಳನ್ನು ಪಾಯಸ ಮತ್ತು ಒಬ್ಬಟ್ಟು ಇವರುಗಳ ಕೈಗೆ ಕೊಡಬೇಕಾಗಿ, ತುಪ್ಪದ ವಿನಂತಿ!



ವಿವರಗಳಿಗೆ ಇಲ್ಲಿ ಸಂಪರ್ಕಿಸಿ :
ರಸಗುಲ್ಲ ಪ್ರಿಂಟರ್ಸ್, ಜಹಾಂಗೀರ್ ಪುರ!

Saturday, July 4, 2009

ಹೆಣ್ಣು ಒಲಿದರೆ........!

ಒಬ್ಬ ಹಳ್ಳಿಯವನು, ಹೊಸದಾಗಿ ಮದುವೇ ಆಗಿರುತ್ತಾನೆ! ಮೂರು ದಿನಗಳು ಮಾವನ ಮನೆಯಲ್ಲಿ ಕಳೆದ ನಂತರ ಹೆಂಡತಿಯೊಂದಿಗೆ ತನ್ನ ಮನೆಗೆ ಹೊರಡಲು ಸಿದ್ದವಾಗಿರುತ್ತಾನೆ. ಹೊರಡುವ ಮುಂಚೆ ಮಾವ ಈ ಅಳಿಯನನ್ನು ಕರೆದು, ತನ್ನ ಮಗಳ ಬಗ್ಗೆ ಕೆಲವು ಲೋಕಾರೂಡಿಯ ಮಾತುಗಳನ್ನಾಡಿ ಕೊನೆಯಲ್ಲಿ ಒಂದು ಮಾತು ಹೇಳುತ್ತಾರೆ! ಅದೇನೆಂದರೆ, ನೋಡಿ ಅಳಿಯಂದ್ರೆ, ಹೆಣ್ಣು ಚಂಚಲೆ ಮತ್ತು ವಿಚಿತ್ರ ಸ್ವಭಾವದವಳಾಗಿರುತ್ತಾಳೆ, ಹೆಣ್ಣಿನ ಮನಸ್ಸು ಅರಿಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಹೆಣ್ಣಿನ ಬಗ್ಗೆ ನಮ್ಮ ಹಿರಿಯರು ಒಂದು ಮಾತು ಹೇಳುತ್ತಿದ್ದರು "ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ" ಎಂದು!! ಈ ಮಾತನ್ನು ನಾನು ನಿಮ್ಮ ಕಿವಿಗೆ ಹಾಕಿದ್ದೇನೆ, ಈ ವಿಷಯವನ್ನು ಮನದಲ್ಲಿ ಇಟ್ಟುಕೊಂಡು, ನನ್ನ ಮಗಳ ಮನಸ್ಸನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಹೊಂದಿಕೊಂಡು ಅನ್ಯೋನ್ಯ ದಾಂಪತ್ಯ ನಡೆಸಿ. ಮುಂದಿನ ನಿಮ್ಮ ಜೀವನ ಶುಭಾಮಯವಾಗಿರಲಿ ಎಂದು ಹಾರೈಸುತ್ತಾ ಅಳಿಯ ಮತ್ತು ಮಗಳನ್ನು ಬೀಳ್ಕೊಡುತ್ತಾರೆ!


ಮದುವೆಯಾಗಿ, ಕೆಲವು ತಿಂಗಳು ಕಳೆಯಿತು. ಅಷ್ಟರಲ್ಲಿ ಒಂದು ದೊಡ್ಡ ಹಬ್ಬ ಬರುತ್ತಿತ್ತು. ಆ ಹಬ್ಬಕ್ಕೆ ಅಳಿಯ ಮತ್ತು ಮಗಳನ್ನು ಅಹ್ವಾನಿಸಿದ್ದೂ ಆಯಿತು. ಹಬ್ಬ ಹತ್ತಿರ ಬರುತ್ತಿದ್ದಂತೆ ಅಳಿಯಂದ್ರು ಹೊರಟರು ಮಾವನ ಮನೆಗೆ! ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಾವನಿಗೆ ಬಂಡಿ (ಎತ್ತಿನ ಗಾಡಿ) ಸದ್ದು ಕೇಳಿ ಸಂಭ್ರಮದಿಂದ, ಮನೆಯವರನ್ನೆಲ್ಲಾ ಕೂಗುತ್ತಾ ಅವರನ್ನು ಬರಮಾಡಿಕೊಳ್ಳಲು ಹೊರಗೆ ಬರುತ್ತಾರೆ. ಅಷ್ಟರಲ್ಲಿ ಗಾಡಿ ಇಳಿದು ಮನೆ ಮುಂದೆ ನಿಂತಿದ್ದ ಅಳಿಯನಿಗೆ ಕೈ ಕಾಲು ತೊಳೆಯಲು ನೀರು ಕೊಡುತ್ತಾ, ಮಾವ ತನ್ನ ಮಗಳ ಬಗ್ಗೆ ವಿಚಾರಿಸುತ್ತಾರೆ! ಎಲ್ಲಿ ಅಳಿಯಂದ್ರೆ ನನ್ನ ಮಗಳು? ನೀವು ಅವಳನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಬರಲಿಲ್ವಾ ಅಂತ ಕೇಳುತ್ತಾರೆ!!

ಅದಕ್ಕೆ ಅಳಿಯಂದ್ರು ಹೇಳುತ್ತಾರೆ, ಅಯ್ಯೋ ಅವಳು ನನ್ನ ಜೊತೆಗೆ ಹೊರಟಳು ಮಾವ. ಆದರೆ, ಮತ್ತೆ...... ಮತ್ತೆ......., ಆ ದಿನ ನೀವೇ ಹೇಳಿದ್ರಲ್ವ 'ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ' ಅಂತ! ಅದಕ್ಕೆ...... ಅವಳು ಅವಾಗವಾಗ ತುಂಬಾ ಮುನಿಸಿಕೊಳ್ಳುತ್ತಿದ್ದಳು ಮಾವ, ಆದ್ದರಿಂದ ಬರುವಾಗ ದಾರಿಯಲ್ಲಿ ಅವಳನ್ನು ಪಕ್ಕದ ಹಳ್ಳಿಯವನಿಗೆ 'ಮಾರಿ' ಬಿಟ್ಟು ಬಂದೆ!!!!! ಅಂತ !*!*?*!*! ಈ ಮಾತನ್ನು ಕೇಳಿದ ಮಾವನಿಗೆ ಬೆಸ್ತೋ ಬೇಸ್ತು!!!


ಮೊನ್ನೆ ಹೀಗೆ ನನ್ನ ಹಳೆಯ ಪುಸ್ತಕಗಳನ್ನು ಜಾಲಾಡುವಾಗ, ಅದರಲ್ಲಿ ನಾನು ಸಂಗ್ರಹಿಸಿದ್ದ ಈ ಪುಟ್ಟ ಲೇಖನ ದೊರೆಯಿತು. ಅದನ್ನು ನನ್ನ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಈ ವಾರ ಅದನ್ನೇ ಬರೆದಿದ್ದೇನೆ.
ಪ್ರಿಯ ಸ್ನೇಹಿತರೆ, ಬಹುಷಃ ನಿಮಗೆಲ್ಲರಿಗೂ ಈ ಜೋಕು ಗೊತ್ತಿರಬಹುದು ಎಂದುಕೊಳ್ಳುತ್ತೇನೆ. ನಿಮ್ಮ ಅನಿಸಿಕೆ ತಿಳಿಸಿ.