Friday, January 1, 2010
Monday, November 2, 2009
ನಾವು ಅಮಾಯಕರು......!
ಅದಕ್ಕೇನೀಗ ಅಂತೀರಾ, ಬೈಕೋಬೇಡಿ ಪ್ಲೀಸ್.....! ಸರಿ ಸರಿ ಮುಂದಕ್ಕೆ ಓದಿ ಆಯಿತಾ.
ನಮ್ಮಮ್ಮ ರಜದಲ್ಲಿ ಇಲ್ಲಿಗೆ ಬರೋಕೆ ಮುಂಚೆ, ಬಂದಿದ್ದಾಗ, ಬಂದು ಹೋದಮೇಲೆ ಫೋನ್ ನಲ್ಲಿ......, ಹೀಗೆ ಒಂದೇ ಸಮ ನನ್ನ, ಅವರ ಮನೆಗೆ (ತವರಿಗೆ) ಬರುವಂತೆ ಪೀಡಿಸುತ್ತಿದ್ದರು!
ಇದೇನಿದು ಅಮ್ಮಂದಿರು ಕರೆದರೆ ಸಾಕು ತವರಿಗೆ ಹೋಗಲು ತುದಿಗಾಲಲ್ಲಿ ನಿಂತು, ಅವಕಾಶಕ್ಕಾಗಿ ಕಾಯೋ ಹೆಣ್ಣುಮಕ್ಕಳು ಇರುತ್ತಾರೆ! ಆದರೆ ನನ್ನನ್ನು ನೋಡಿದರೆ, ಅಮ್ಮ ಕಾಡಿಸುತ್ತಾರೆ, ಪೀಡಿಸುತ್ತಾರೆ ಅಂತೆಲ್ಲಾ ಬರೆದಿದ್ದೀನಿ ಅಂತ ಅಂದುಕೊಳ್ಳುತ್ತಿದ್ದೀರಾ? ಏನ್ಮಾಡೋದು ಹೇಳಿ, ನನ್ನ ಕಥೆನೇ ಒಂದು ಥರ ವಿಚಿತ್ರ!! ಇರಲಿ ಬಿಡಿ ಅದನ್ನ ಮುಂದೆ ಯಾವಾಗದರೊಮ್ಮೆ ನಿಮ್ಮ ಹತ್ರ ಹೇಳಿಕೊಬೇಕು ಅನಿಸಿದರೆ ಹೇಳ್ತೀನಿ..... ಓಕೆ!ಹಾಗಂತ ನಾನೇನು ತವರಿಗೆ ಹೋಗದೆ ಏನು ಇರ್ತಿರ್ಲಿಲ್ಲ, ನಮ್ಮ ಮಧ್ಯೆ ಏನೇ ಇದ್ದರೂ ನಾನಂತೂ ಸಹಜವಾಗೇ ಹೋಗಬೇಕಾದಾಗ ಹೋಗಿಬರುತ್ತಿದ್ದೆ.
ಆದರೆ ಈ ಸಲ ಸುತರಾಂ ನನಗೆ ಹೋಗಲು ಇಷ್ಟವಿರಲಿಲ್ಲ, ಅದಕ್ಕೆ ಬಲವಾದ ಕಾರಣವೂ ಇತ್ತು. ಎಷ್ಟು ಬರೋಲ್ಲ ಅಂತ ಹೇಳಿದರೂ ಸುಮ್ಮನೆ ಇರ್ತಾಇರಲಿಲ್ಲ ಅದಕ್ಕೆ ಒಂದು ಉಪಾಯ ಮಾಡಿ ಒಂದು ಕಾರಣ ಹೇಳ್ತಾ ಇದ್ದೆ ಅದೇನೆಂದರೆ, ಅಕ್ಕ ಬರಲಿ ಆಗ ನೋಡೋಣ ಅಂತ! ನನ್ನಕ್ಕನನ್ನು ಈ ಸಲ ತವರಿಗೆ ಕಳಿಸೋಲ್ಲ ಎನ್ನುವ ಧೃಡವಾದ ನಂಬಿಕೆ ಇತ್ತು ಅದಕ್ಕೆ ಕಾರಣ ಕಳೆದ ವರ್ಷ ಬೇಸಿಗೆ ರಜೆಯಲ್ಲಿ, ಆಕೆಯ ಚಿಕ್ಕ ಮಗನ ನಾಮಕರಣದ ಸಮಯದಲ್ಲಿ ಆಕೆಯ ಅತ್ತೆ ಮನೆಯವರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಪ್ಪ, ಅಮ್ಮನೊಂದಿಗೆ ಗಲಾಟೆ/ಜಗಳ ಮಾಡಿಕೊಂಡಿದ್ದರು! ಈ ಗಲಾಟೆಯಾದ ನಂತರದಲ್ಲಿ ಆಗಾಗ ಆಕೆಯನ್ನು ಆ ಊರಿಗೆ ಅವರು ಕರೆದುಕೊಂಡು ಬಂದಿದ್ದರೂ, ಅವಳನ್ನು ತವರಿಗೆ ಕಳುಹಿಸಿರಲಿಲ್ಲ ಆದ್ದರಿಂದ. ಅದೂಅಲ್ಲದೆ ಒಂದು ವರ್ಷ ಕಳೆಯುವುದರೊಳಗಾಗಿ, ಅವರುಗಳ ಕೋಪವೂ ಸ್ವಲ್ಪ ಕರಗಿ ಮೂರನೆಯವರ ಮುಖಾಂತರ, ಉಗಾದಿ ಹಬ್ಬಕ್ಕೆ ಅವರು ಬಂದು ಕರೆದರೆ ಕಳುಹಿಸುತ್ತೇವೆ ಎಂದು ಹೇಳಿದ್ದರು.
ಅವರ ಮಾತಿನ ಪ್ರಕಾರವೇ, ಅಪ್ಪ ಹೋಗಿ ಹಬ್ಬಕ್ಕೆ ಮತ್ತು ರಜಕ್ಕೆ ಕರೆದುಬಂದಿದ್ದರೂ ಅವರು ಮಾತು ಉಳಿಸಿಕೊಳ್ಳಲಿಲ್ಲ, ಹಾಗಾಗಿ ಹಬ್ಬಕ್ಕೆ ಆಕೆಯನ್ನು ಕಳುಹಿಸಿರಲಿಲ್ಲ. ಸರಿ ಈಗ ಪರೀಕ್ಷೆಯ ಸಮಯ ದೊಡ್ಡ ಮಗನಿಗೆ ಶಾಲೆ ತಪ್ಪಿಸಿ ಬರಲಾಗುವುದಿಲ್ಲ ರಜದಲ್ಲಿಯಾದರು ಬರುತ್ತಾಳೆನೋ ನೋಡೋಣ ಅಂತ ಸಮಾಧಾನ ಪಟ್ಟುಕೊಂಡಿದ್ದರು. ಹಬ್ಬ, ಪರೀಕ್ಷೆ, ಫಲಿತಾಂಶ ಸಮಯ ಎಲ್ಲಾ ಮುಗಿಯಿತು, ಊ.... ಹ್ಞೂ....! ಅವಳು ಬರಲೇ ಇಲ್ಲ. ಇದರಿಂದ ನಮಗೆಲ್ಲಾ ಬೇಸರವಾಗಿದ್ದರೂ ನನಗಂತೂ ಒಂದು ಬಲವಾದ ಕಾರಣ ಸಿಕ್ಕಿತ್ತಲ್ಲ, ಅದೇ ಖುಷಿ!! ಆದರೆ ನನ್ನ ದೊಡ್ಡಕ್ಕ (ದೊಡ್ಡಮ್ಮನ ಮಗಳು) ರಜೆಯ ಪ್ರಾರಂಭದಲ್ಲೇ ಅವರು ತಮ್ಮ ತವರಿಗೆ ಒಂದು ಭೇಟಿ ನೀಡಿಯಾಗಿತ್ತು, ನಮ್ಮ ಮನೆಗೆ ಬರುವುದಕ್ಕೆ ಮುಂಚೆನೆ! ಇದನ್ನೂ ಸೇರಿಸಿ ಅಮ್ಮನಿಗೆ, ನೋಡು ಲಕ್ಷ್ಮಿ ಅಕ್ಕ ಬಂದಾಗ ಪುಷ್ಪಕ್ಕನೂ ಮತ್ತೆ ಊರಿಗೆ ಬರುತ್ತೀನಿ ಅಂತ ಒಪ್ಪಿಕೊಳ್ಳಲಿ ಆಗ ನಾನು ಬರುವುದರ ಬಗ್ಗೆ ಯೋಚನೆ ಮಾಡುತ್ತೇನೆ ಅಲ್ಲಿವರೆಗೂ ಈ ವಿಷಯವಾಗಿ ನನ್ನ ಮಾತಾಡಿಸಬೇಡ ಆಯಿತಾ....., ಅಂತ ಹೇಳಿ ತಪ್ಪಿಸಿಕೊಂಡಿದ್ದೆ! ಈ ಮಾತಿಗೆ ನನ್ನ ದೊಡ್ಡ ಅಕ್ಕಾನೂ, ಹೌದು ಅವಳು (ಲಕ್ಷ್ಮಿ) ಅಕಸ್ಮಾತ್ ಬಂದರೆ ನೋಡೋಣ ಇಲ್ಲಾಂದರೆ ಸಧ್ಯಕ್ಕೆ ನಾನಂತೂ ಮತ್ತೆ ಊರಿಗೆ ಹೋಗೋಲ್ಲ ಅಂತ ಹೇಳಿ ಅಷ್ಟಕ್ಕೆ ಸುಮ್ಮನಿರದೆ, ನನ್ನ ಕುರಿತು, ಅವಳು ಬರಲಿಲ್ಲ ನೀನೂ ಹೋಗಿಲ್ಲಾ ಅಂದರೆ ನಿಮ್ಮಮ್ಮನಿಗೆ ಬೇಜಾರಾಗೊಲ್ವ ಒಂದೆರಡು ದಿನದ ಮಟ್ಟಿಗೆ ಹೋಗಿಬಾ ಎಂದು ಎತ್ತಿ ಕಟ್ಟಿದರು. ನಮ್ಮಮ್ಮನಿಗೆ ಅಷ್ಟೇ ಸಾಕಾಯಿತು, ಚೂಡಮ್ಮ....ಗೀಡಮ್ಮ (ನೋಡಮ್ಮ) ಎಂದೆಲ್ಲಾ ಶುರು ಮಾಡಿಕೊಂಡರು. ನಾನಾಗ, ನೋಡಿ ಬರಲ್ಲ ಅಂದಮೇಲೆ ಮುಗಿಯಿತು, ಎಷ್ಟು ಸಲ ಹೇಳೋದು ಅದೂ ಅಲ್ಲದೆ ನೀವೇ ಎಲ್ಲಾ ಬಂದು ನೋಡಿದ್ದೀರಲ್ಲ ಇನ್ನು ನಾನ್ಯಾಕೆ, ಸುಮ್ಮಸುಮ್ಮನೆ ಊರಿಗೆ ಬೇರೆ ಬರಬೇಕು? ಇನ್ನು ಇದರ ಬಗ್ಗೆ ಜಾಸ್ತಿ ಮಾತಾಡಿದರೆ ಅಷ್ಟೇ......ಅಂತ ಸ್ವಲ್ಪ ಕೋಪವಾಗೆ ಹೇಳಿದೆ. ಇಷ್ಟಾದ ಮೇಲೆ, ನನ್ನ ಜಗಮೊಂಡಿ....., ಹಠಮಾರಿ ಅಂತ ಒಂದೆರಡು ಬಿರುದು ಕೊಟ್ಟು ಅಮ್ಮ ತಮ್ಮ ಅಹಂ ಅನ್ನು ಸಮಾಧಾನ ಪಡಿಸಿಕೊಂಡರು!!!
ಸ್ವಲ್ಪ ದಿನಗಳ ನಂತರ ನನ್ನ ತಮ್ಮ ಫೋನ್ ಮಾಡಿ, ಅಕ್ಕ ಬಂದಿದಾಳೆ ನೀನು ಬೇಗ ಬಾ, ಯಾವಾಗ ಬರ್ತೀಯ ಎಂದು ಕೇಳಿದ. ಅದಕ್ಕೆ ನಾನು, ಹೋಗೋ ಸುಮ್ಮನೆ, ನಾನೇನು ನನ್ನ ಕಿವೀಲಿ ಕಾಲೀ ಫ್ಲವರ್ ಇಟ್ಟುಕೊಂಡಿಲ್ಲ. ಯಾರನ್ನು ಫೂಲ್ ಮಾಡ್ತೀಯಾ, ಬೇರೆ ಯಾರನ್ನಾದರೂ ನೋಡಿಕೋ ನನ್ನ ಬಿಟ್ಬಿಡು, ಬಾಯ್ ಅಂತ ಹೇಳುತ್ತಿದ್ದ ಹಾಗೆ, ನಿಜವಾಗಲೂ, ಪ್ರಾಮಿಸ್ ಬೇಕಾದರೆ ನೀನೆ ಮಾತಾಡು ಅಂತ ಹೇಳಿ ಅಕ್ಕನಿಗೆ ಫೋನ್ ಕೊಟ್ಟೆಬಿಟ್ಟ (ಪಾಪ ಚೆನ್ನಾಗೇ ಆಟ ಆಡ್ಸಿದ್ದೀನಿ ಅವನ್ನ). ಅಕ್ಕನೊಂದಿಗೆ ಮಾತಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡು, ಆಕೆ ಬಂದಿರೋದನ್ನ ಪ್ರಸ್ತುತ ಪಡಿಸಿಕೊಂಡ ನಂತರ ಆಕೆ ನನಗೆ ಗೋಗರೆಯಲು ಶುರು ಮಾಡಿದಳು. ಪ್ಲೀಸ್ ಬಾರೆ ನನಗೋಸ್ಕರ ಬಾರೆ, ನಿಮ್ಮನ್ನೆಲ್ಲಾ ನೋಡಬೇಕು ಅನ್ನಿಸುತ್ತಿದೆ, ಪುಷ್ಪಕ್ಕನೂ ಬರುತ್ತಾಳೆ, ಬಾರೆ ಎಂದೆಲ್ಲಾ ವಿಧವಿಧವಾಗಿ ಪುಸಲಾಯಿಸುತ್ತಿದ್ದಳು! ಅದಕ್ಕೆ ನಾನು ಆಹಾ ಅಮ್ಮಣ್ಣಿ ನೀನು ಬಂದು ಬಿಟ್ಟಿದ್ದೀಯ ಅಂತ ನಾವೆಲ್ಲಾ ನಿನ್ನ ನೋಡೋಕೆ ಬಂದು ಬಿಡಬೇಕಾ? ಏನು ಮಹಾರಾಣಿ ನೀನು, ಹೋಗೆ ಬರೋಲ್ಲ ಅಂತಂದೆ (ಅವಳ ಮಗನ ನಾಮಕರಣದಲ್ಲಿ ನಮ್ಮನ್ನೆಲ್ಲಾ ಅವಳು ಸರಿಯಾಗಿ ಮಾತನಾಡಿಸಿರಲಿಲ್ಲ, ಆ ಬೇಸರ ಬೇರೆ ಇತ್ತು ಅದಕ್ಕೆ.) ಮತ್ತೆ ನೀನೆ ನಮ್ಮ ಮನೆಗೆ ಬಾ, ನಾನು ಬರೋಲ್ಲ ಅಂತ ಹೇಳಿದೆ. ಅದಕ್ಕವಳು, ಪ್ಲೀಸ್ ಕಣೆ ಇಲ್ಲಿಗೆ ಕಳುಹಿಸುವುದಕ್ಕೆ ಅವರು ಏನೆಲ್ಲಾ ಕಂಡೀಷನ್ ಹಾಕಿದ್ದಾರೆ ಗೊತ್ತಾ.... ಅರ್ಥ ಮಾಡಿಕೊ, ಬೇರೆ ಎಲ್ಲೂ ಹೋಗೋ ಹಾಗೆ ಇಲ್ಲ ನಿನಗೆ ಗೊತ್ತಿಲ್ಲದೆ ಇರೋದು ಏನಿದೆ ಹೇಳು ಎಂದಳು. ಸರಿ ಸರಿ ಪುಷ್ಪಕ್ಕನ್ನ ಕೇಳ್ತೀನಿ ಆಕೆ ಒಪ್ಪಿಕೊಂಡರೆ ಸರಿ ಇಲ್ಲಾಂದರೆ ನೀನೆ ಒಪ್ಪಿಸಬೇಕು ಇಷ್ಟು ಹೇಳಿ ಲೈನ್ ಕಟ್ ಮಾಡಿದೆ.
ದೊಡ್ದಕ್ಕನೊಂದಿಗೆ ಮಾತಾಡಿಕೊಂಡು ನಾವಿಬ್ಬರೂ ಕೂಡಿ ಕಳೆದು ಲೆಕ್ಕಾಚಾರ ಮಾಡಿ ನಂತರ ಇಬ್ಬರೂ ಹೋಗಲು ನಿಶ್ಚಯಿಸಿಕೊಂಡೆವು! ಮೇ ನಲ್ಲಿ ಅರ್ಧ ತಿಂಗಳು ಕಳೆದೆ ಹೋಗಿತ್ತು, ಆಗ ಬಂದಿದ್ದಳು ನಮ್ಮ ಮಹರಾಯಿತಿ.
ಅಂದುಕೊಂಡಂತೆ ನಾವಿಬ್ಬರೂ ಸೋಮವಾರ ಊರಿಗೆ ತಲುಪಿದೆವು. ಆಕೆಗೆ ಅವರೂರಿಂದ ಬಂದು ತಲುಪಲು ೫ ಗಂಟೆ ಕಾಲ ಬೇಕು ಅದೂ ನೇರ ಬಸ್ ಸಿಕ್ಕಿದರೆ ಇಲ್ಲಾಂದರೆ ಇನ್ನೂ ಲೇಟ್ ಆಗಿಬಿಡುತ್ತೆ. ನಾನು ಬೇಗ ತಲುಪಿದ್ದೆ. ಆಕೆ ಬರುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಸೀದಾ ನಮ್ಮ ಮನೆಗೆ ಬಾ ಅಂತ ಹೇಳಿದ್ದರೂನೂ ಅವರಮ್ಮ ಎಲ್ಲಿ ಕೋಪ ಮಾಡಿಕೊಂಡು ಬಿಡುತ್ತಾರೋ ಅಂತ ಆಕೆ ಅವರ ಮನೆಗೆ ಒಂದು ಭೇಟಿ ನೀಡಿ ಆಮೇಲೆ ಬಂದರು.
ಕೈಗೆ ಪೆಟ್ಟಾಗಿದ್ದ ಕಾರಣ ಈ ಲೇಖನವನ್ನು ಒಮ್ಮೆಲೇ ಮುಗಿಸಲಾಗಿರಲಿಲ್ಲ. ಇದರ ಮುಂದುವರಿದ ಭಾಗ ಆದಷ್ಟು ಬೇಗ ಬರೆಯುತ್ತೇನೆ.
Friday, October 9, 2009
ಅಕ್ಕನ ಅವಾಂತರ.....!
ಬಹಳ ವರ್ಷಗಳ ಹಿಂದಿನ ಮಾತು, ಆಗ ಅಕ್ಕನ ಮದುವೆ ನಿಶ್ಚಯವಾಗಿತ್ತು! ನಾವೆಲ್ಲ ಇದ್ದದ್ದು ಬೆಂಗಳೂರಿನಲ್ಲೇ ಆದರೂ, ಆಕೆಯ ಮದುವೆಯನ್ನು ಊರಿನಲ್ಲಿ ಮಾಡಬೇಕೆಂದು ಹಿರಿಯರು ನಿಶ್ಚಯಿಸಿದ್ದರು. ಏಕೆಂದರೆ ವಧು-ವರ ಇಬ್ಬರ ಮನೆಯವರಿಗೂ ಕಾಮನ್ ಊರು ಅದಾಗಿತ್ತು ಮತ್ತು ನಮ್ಮ ಹೆಚ್ಚಿನ ನೆಂಟರು, ಬಂಧು ಬಳಗ ಎಲ್ಲ ಆ ಊರಿನಲ್ಲೇ ಇರುವುದು.
ನಮಗೆ ಆ ಊರಲ್ಲಿ ಸ್ವಂತ ಮನೆ ಇರಲಿಲ್ಲ, ಆದರೆ ತಂದೆಗೆ ಬರಬೇಕಿದ್ದ ಜಾಗದ ಪಾಲು ಒಬ್ಬ ದೊಡ್ಡಪ್ಪನ ಮನೆಯೊಂದಿಗೆ ಬೆಸೆದುಕೊಂಡಿತ್ತು. ಬೇರೆ ಇನ್ನಿಬ್ಬರು ದೊಡ್ದಪ್ಪಂದಿರು ಅದೇ ಊರಿನಲ್ಲೇ ಇದ್ದರೂ, ನಾವು ಊರಿಗೆ ಹೋದಾಗಲೆಲ್ಲ ನಮ್ಮ ತಂದೆಯ ಪಾಲಿದ್ದ ದೊಡ್ಡಪ್ಪನ ಮನೆಯಲ್ಲಿಯೇ ತಂಗುತ್ತಿದ್ದೆವು! ಅದಕ್ಕೆ ಇನ್ನೊಂದು ಕಾರಣವೇನೆಂದರೆ, ಈ ದೊಡ್ಡಪ್ಪನ ಹೆಂಡತಿ ಅಂದರೆ ದೊಡ್ಡಮ್ಮ ನನ್ನ ತಾಯಿಯ ಅಕ್ಕನೂ ಆಗಿದ್ದರು ಆದ್ದರಿಂದ ಬೇರೆಯವರಿಗಿಂತಾ ನಮಗೆ ಇವರಲ್ಲಿಯೇ ಹೆಚ್ಚಿನ ಸಲುಗೆ ಇತ್ತು!
ಸರಿ, ಇನ್ನೇನು ಮದುವೆ ದಿನಗಳು ಹತ್ತಿರ ಬರುತ್ತಿದ್ದವು, ಮನೆಯ ಮಕ್ಕಳು, ನೆಂಟರು ಬಂಧು ಬಳಗ ಇವರೆಲ್ಲರಿಂದ ಮನೆ ಗಿಜಿಗುಡುತ್ತಿತ್ತು! ಇಷ್ಟೇ ಅಲ್ಲದೆ ಕೆಲಸವಿದ್ದಾಗ ಅಥವಾ ಸಂಜೆಯ ಬಿಡುವಿನ ವೇಳೆಯಲ್ಲಿ ಅಕ್ಕಪಕ್ಕದ ಮನೆಯ ಬಂಧುಗಳೂ ಬಂದು ಹೋಗುತ್ತಿದ್ದರು!! ಹೀಗಿರುವಾಗ ಅದೊಂದು ದಿನ ಸಂಜೆ, ಕಾಫಿ/ಟೀ ಸಮಯ. ಅಷ್ಟೊಂದು ಜನಕ್ಕೂ ನನ್ನ ದೊಡ್ಡ ಅಕ್ಕ ಮತ್ತು ಅತ್ತಿಗೆ ಸೇರಿ ಕಾಫಿ, ಟೀ ಯಾರ್ಯಾರಿಗೆ ಯಾವುದು ಬೇಕು ಎಂದು ಕೇಳಿ ಮಾಡಿ ಕೊಟ್ಟರು. ನಾನು ಎಲ್ಲರಿಗೂ ಸಪ್ಲೈ ಮಾಡಿದೆ, ಎಲ್ಲರೂ ಕುಡಿದು ಮುಗಿಸುವ ವೇಳೆಗಾಗಲೇ ಕತ್ತಲಾಗುತ್ತಾ ಬಂತು. ಸಂಜೆ ಎಂದಿನಂತೆ ಮನೆಯಲ್ಲಿ ವಿದ್ಯುತ್ ದೀಪ ಮತ್ತು ದೇವರ ಮುಂದೆ ಎಣ್ಣೆಯ ದೀಪ ಬೆಳಗಿಸಿ ಎಲ್ಲರೂ ಅವರವರ ಕೆಲಸಗಳಲ್ಲಿ ವ್ಯಸ್ತರಾಗಿದ್ದರು.
ಆ ಸಮಯದಲ್ಲಿ ಅದೇ ಓಣಿಯಲ್ಲಿ ವಾಸವಿರುವ ನಮ್ಮ ನೆಂಟರೊಬ್ಬರ ಮಗ ನಮ್ಮ ಮನೆಗೆ ಬಂದರು. ನಮ್ಮ ಊರಿನ ಜನರಲ್ಲೇ ಅವರು ಸ್ವಲ್ಪ ಶಿಫಾರಸ್ಸಿರುವ ವ್ಯಕ್ತಿ, ಯಾವುದೋ ಕೆಲಸ ಹೇಳಿದ್ದರಿಂದ ಆ ಕೆಲಸ ಆಯಿತೋ ಇಲ್ಲವೊ ಎಂದು ಕೇಳಿ ತಿಳಿಯಲು ಮನೆಗೆ ಬಂದಿದ್ದರು. ಅವರನ್ನು ಬರಮಾಡಿಕೊಂಡು ಕೂರಲು ಹೇಳಿ, ಅವರೂ ಕುಳಿತುಕೊಳ್ಳುತ್ತಿದ್ದಂತೆಯೇ, ಅದೇ ಸಮಯಕ್ಕೆ ಸರಿಯಾಗಿ ಕರೆಂಟ್ ಹೊರಟುಹೋಯಿತು! ಆ ಕಾಲದಲ್ಲಿ ಮಧ್ಯಮ ವರ್ಗದ ಮನೆಗಳಲ್ಲಿ, ಮೇಣದ ಬತ್ತಿ ಅಥವಾ ಚಿಮಣಿ ದೀಪ ಬಿಟ್ಟರೆ ಬೇರೆ ಯಾವುದೇ ಸಾಧನಗಳಿರಲಿಲ್ಲ. ಅವಸರದಲ್ಲಿ ಒಂದೇ ಒಂದು ಮೇಣದ ಬತ್ತಿ ಬಿಟ್ಟರೆ ಆ ಸಂಧರ್ಭದಲ್ಲಿ ಬೇರೆ ಏನೂ ಕೈಗೆ ಸಿಕ್ಕಿರಲಿಲ್ಲ , ಆ ಕ್ಷಣಕ್ಕೆ ಅದನ್ನೇ ಬೆಳಗಿಸಿ ಹಾಲಿನಲ್ಲಿ ತಂದು ಇಟ್ಟಿದ್ದರು! ಆ ಮಬ್ಬು ಬೆಳಕಿನಲ್ಲಿ ಒಬ್ಬರಿಗೊಬ್ಬರು ಅಸ್ಪಷ್ಟವಾಗಿ ಕಾಣುತ್ತಿದ್ದರು. ದೊಡ್ಡಮ್ಮ ಅವರೊಂದಿಗೆ ಮಾತಿಗಿಳಿದರು!
ಕಾಫಿ ಕುಡಿಯಪ್ಪಾ ರವಿ ಎಂದು ದೊಡ್ಡಮ್ಮ ಕೇಳಿದಾಗ ಅವರು, ಇಲ್ಲ ಬೇಡ ಈಗ ತಾನೇ ಆಯಿತು ಎಂದು ಹೇಳಿದರು. ಅದಕ್ಕೆ ದೊಡ್ಡಮ್ಮ ಮನೆಗೆ ಬಂದು ಏನು ತಗೊಳ್ಳದಿದ್ದರೆ ಹೇಗೆ, ನಮ್ಮೆಲ್ಲರದೂ ಸಹ ಈಗ ತಾನೇ ಆಯಿತು. ಕಾಫಿ ರೆಡಿಯಾಗೆ ಇದೆ, ಕುಡಿದೆ ಹೋಗಬೇಕು ಅಂತ ಬಲವಂತ ಮಾಡಿದರು. ಅಷ್ಟು ಬಲವಂತ ಮಾಡಿದ ಮೇಲೆ ಅವರು ಏನೂ ಹೇಳದೆ ಸುಮ್ಮನಾಗಿಬಿಟ್ಟರು. ನಂತರ ಅವರಿಗೆ ಯಾರಾದರೂ ಕಾಫಿ ತಂದುಕೊಡಿ, ಕೆಟಲ್ಲಿನಲ್ಲಿ ಕಾಫಿ ಸಿದ್ದವಾಗೆ ಇದೆ ಅದನ್ನೇ ಬಿಸಿ ಮಾಡಿ ಬೇಗ ತಗೊಂಡು ಬನ್ನಿ ಎಂದು ದೊಡ್ಡಮ್ಮ ಹೇಳಿದರು. ಮನೆಯಲ್ಲಿ ಅಷ್ಟೊಂದು ಜನ ಇದ್ದರೂ ಯಾರಾದರೂ ಹೋಗುತ್ತಾರೋ ಇಲ್ಲವೊ ಅಂತ ನನಗೆ ತರಲು ಹೇಳಿದರು. ನಾನು ಮಾಡುತ್ತಿದ್ದ ಕೆಲಸ ಬಿಟ್ಟು , ನಿಜ ಹೇಳಬೇಕೆಂದರೆ ಕತ್ತಲಲ್ಲಿ ಹೋಗಲು ಹೆದರಿಕೆಯಾಗಿ ಸ್ವಲ್ಪ ನಿಧಾನಿಸಿದೆ. ಅಡುಗೆ ಮನೆಗೆ ಹೋಗುವಷ್ಟರಲ್ಲಿ ನನ್ನ ಅಕ್ಕ ನನಗೆ ಮುಂಚೆ ಅಡುಗೆಮನೆ ಸೇರಿ ಕಾಫಿ ಎಲ್ಲಿದೆ ಎಂದು ಆ ಕತ್ತಲಲ್ಲಿ ಹುಡುಕುತ್ತಿದ್ದಳು. ಆಗ ಆಕೆಯ ಕೈಗೊಂದು ಬಿಸಿ ಕಾಫಿ ಇರುವ ಲೋಟ ಸಿಕ್ಕಿತು, ಬಿಸಿಯಾಗೇ ಇದೆ ಅಂತ ಅವಸರದಲ್ಲಿ ಅದನ್ನು ಹಾಗೆ ತೆಗೆದುಕೊಂಡು ಹೋಗಿ ಅವಳೇ ಸ್ವತಹ ಅವರಿಗೆ ನೀಡಿದಳು. ಅಷ್ಟರಲ್ಲಿ ಅವರ ಮಾತುಕಥೆ ಎಲ್ಲ ಮುಗಿದಿತ್ತು!! ಈಕೆ ಕೊಟ್ಟ ಕಾಫಿ ಕುಡಿದು ನಂತರ ನಾನಿನ್ನು ಹೊರಡುತ್ತೇನೆ ಎಂದು ಹೇಳಿ ಹೊರಟು ಹೋದರು!!!
ಮದುವೆ ಎಂದ ಮೇಲೆ ಸಾಕಷ್ಟು ಕೆಲಸಗಳಿರುತ್ತವಲ್ಲ, ಅದರೊಂದಿಗೆ ಚಿಕ್ಕಮಕ್ಕಳ ಆಟಪಾಠ, ಚೀರಾಟ ಮತ್ತು ದೊಡ್ಡವರ ಮಾತು ಕಥೆಗಳು ಇವುಗಳ ಮಧ್ಯೆ, ಕತ್ತಲಲ್ಲೂ ಕೆಲವರು ಅವರವರ ಕೆಲಸದಲ್ಲಿ ವ್ಯಸ್ತರಾಗಿದ್ದರು, ಇನ್ನು ಕೆಲವರು ಹರಟೆ ಹೊಡೆಯುತ್ತಿದ್ದರು ಮತ್ತೆ ಕೆಲವರು ಹಾಗೆ ವಿಶ್ರಮಿಸಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಕರೆಂಟ್ ಬಂದಿತು. ಚಿಕ್ಕ ಮಕ್ಕಳಿರುವವರು ನಿಮ್ಮ ಮಕ್ಕಳಿಗೆ ಊಟ ಮಾಡಿಸಿಬಿಡಿ ಎಂದು ದೊಡ್ಡವರು ಹೇಳುತ್ತಿದ್ದರು. ಸಾಮಾನ್ಯವಾಗಿ ಮಕ್ಕಳಿಗೆ ಬೇಗ ಊಟ ಮಾಡಿಸುವುದು ವಾಡಿಕೆ ಅಲ್ವಾ, ಅದಕ್ಕೆ!
ಆ ಊರಿನ ಜನರಿಗೆ ಒಂದು ವಿಚಿತ್ರವಾದ ಅಭ್ಯಾಸ! ಅದೇನೆಂದರೆ, ಅಲ್ಲಿನ ಜನ ಯಾರು ಕೇಳಿದರೂ, ಕೇಳದಿದ್ದರೂ ಅವರ ಮನೆಯಲ್ಲಿ ಬಿಸಿ ಅಡುಗೆ ಏನೇ ಮಾಡಿದ್ದರೂ ಅದು ಸಾಧಾರಣವಾದದ್ದಾದರೂ ಸರಿ ವಿಶೇಷವಾಗಿದ್ದರೂ ಸರಿ ಒಟ್ಟಿನಲ್ಲಿ, ಅದರಲ್ಲಿ ಸ್ವಲ್ಪ ಪಾಲನ್ನು ಅವರಿಗೆ ಬೇಕಾದವರ ಮನೆಗಳಿಗೆ ರವಾನಿಸುವ, ತಂದುಕೊಡುವ ಗೀಳು ಇದೆ. ಅಂದರೆ ಒಂದು ರೀತಿ ಹಂಚಿಕೊಂಡು ತಿನ್ನುವ ಅಭ್ಯಾಸ, ಸಹಬಾಳ್ವೆ ಅಂತ ಹೇಳಬಹುದು! ಅದರಲ್ಲೂ ಚಿಕ್ಕ ಮಕ್ಕಳು ಇರುವ ಮನೆ ಎಂದರೆ ಹೇಳುವುದೇ ಬೇಡ, ಮನೆಯಲ್ಲಿ ಮಾಡಿರುವುದಕ್ಕಿಂತಾ ಅವರಿವರು ತಂದು ಕೊಟ್ಟಂತಹ ತಿಂಡಿಗಳೇ ತುಂಬಿರುತ್ತವೆ. ಹಾಗಾಗಿ ನಮ್ಮ ಪಕ್ಕದ ಮನೆಯ ಇನ್ನೊಬ್ಬರು ದೊಡ್ಡಮ್ಮ ಇದ್ದರಲ್ಲ ಅವರು ರಾತ್ರಿಗೆಂದು ಮಾಡಿಕೊಂಡಿದ್ದ ರಸಂ ಅನ್ನು ಒಂದು ಗ್ಲಾಸಿನಲ್ಲಿ ಹಾಕಿ ತಂದುಕೊಟ್ಟಿದ್ದರು.
ಆಗ ಮನೆಯಲ್ಲಿ ಇದ್ದ ಪುಟಾಣಿಗಳು ಮೂರ್ನಾಕು ಮಂದಿ. ಆ ಮಕ್ಕಳಿಗೆಲ್ಲ ಯಾರಾದರು ಒಬ್ಬರೇ ತಿನಿಸೋಣ, ಆಟಾಡ್ತಾ ಒಬ್ಬರನ್ನೊಬ್ಬರು ನೋಡಿ ಬೇಗ ಬೇಗ ತಿಂತಾರೆ ಎಂದು ನಿರ್ಧರಿಸಿ ನನ್ನ ದೊಡ್ಡ ಅಕ್ಕಾನೆ ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು, ಮಕ್ಕಳು ಏನೇನೋ ತಿಂದು ಹೊಟ್ಟೆ ಕೆಡಿಸಿಕೊಳ್ಳುತ್ತವೆ, ಅದಕ್ಕೆ ಅವರಿಗೆ ರಸಂನಲ್ಲೇ ಉಣಿಸೋಣ ಎಂದುಕೊಂಡು ರಸಕ್ಕಾಗಿ ಅಡುಗೆ ಮನೆಯೆಲ್ಲ ಹುಡುಕಾಡುತ್ತಾರೆ ಆದರೆ ರಸ ಮಾತ್ರ ಎಲ್ಲೂ ಸಿಗಲೇ ಇಲ್ಲ. ಆವಾಗ ಆಕೆ ನನ್ನನ್ನು ಕರೆದು ಚಿಕ್ಕಮ್ಮ (ಆಕೆಗೆ ಚಿಕ್ಕಮ್ಮ ಆದರೆ ನಮಗೆ ದೊಡ್ಡಮ್ಮ!) ರಸ ತಂದುಕೊಡುತ್ತೀನಿ ಅಂತ ಹೇಳಿದ್ದರು, ತಂದರೋ ಇಲ್ಲವೊ ಕೇಳು. ತಂದಿಲ್ಲದಿದ್ದರೆ ಅವರ ಮನೆಗೆ ಹೋಗಿ ತಗೊಂಡು ಬಾ ಅಂತ ಹೇಳಿದರು. ನನ್ನ ಆ ಇನ್ನೊಬ್ಬರು ದೊಡ್ಡಮ್ಮ ಅಲ್ಲೇ ಇದ್ದುದರಿಂದ ಅವರಲ್ಲಿ ಕೇಳಿದಾಗ, ಅವರು ಬರುವಾಗ ಜೊತೆಯಲ್ಲೇ ತಂದು ಕೊಟ್ಟೆನಲ್ಲಾ ಎಂದು ಹೇಳಿದರು. ನಾವು ಅಲ್ಲಿ ಹುಡುಕಿದರೂ ಸಿಗದೇ ಇದ್ದ ವಿಷಯ ಹೇಳಿದಾಗ ಆಶ್ಚರ್ಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.........!ಅವರು ರಸ ತಂದಿದ್ದನ್ನು ನೋಡಿದ್ದ ಒಂದಿಬ್ಬರು ತಂದಿದ್ದರೆಂದು ಸಾಕ್ಷಿ ಕೂಡ ಹೇಳಿದ್ದರು. ಮತ್ತೊಮ್ಮೆ ಅಡುಗೆ ಮನೆಗೆ ಬಂದು ಪರಿಶೀಲಿಸಿದಾಗ ಆ ಲೋಟ ಪಾತ್ರೆ ತೊಳೆಯುವ ಜಾಗದಲ್ಲಿ ಇತ್ತು! ಅದರಲ್ಲಿ ರಸ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ತಳದಲ್ಲಿ ಸ್ವಲ್ಪ ಗಟ್ಟಿ ಇರುವ ಅಂಶವು ಉಳಿದಿತ್ತು. ದೊಡ್ಡಕ್ಕ ಒಳಗಿನಿಂದ ಬರುತ್ತಾ, ಹೊರಗೆ ಇರುವವರಲ್ಲಿ ಹೇಳಿದರು ಅದೇನೆಂದರೆ, ರಸ ಇತ್ತು ಆದರೆ ಯಾರೋ ಚೆಲ್ಲಿ ಬಿಟ್ಟಿದ್ದಾರೆ ಇಲ್ಲಾಂದ್ರೆ ಯಾರಾದ್ರು ಕುಡ್ಕೊಂಡು ಬಿಟ್ಟಿರುತ್ತಾರೆ ಅಂತ!
ಆಗ ನಮ್ಮ ಮದುವಣ ಗಿತ್ತಿ ನಡೆದಿರಬಹುದಾದಂತ ವಿಷಯ ವನ್ನು ನೆನಪಿಸಿಕೊಂಡು ಬಿಡಿಸಿ ಹೇಳುತ್ತಾಳೆ, ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಬೆಸ್ತೋ ಬೇಸ್ತು! ಎಲ್ಲರಿಗೂ ಅರ್ಥವಾಗುತ್ತಿದ್ದಂತೆ ಮನೆಯ ಛಾವಣಿ ಕಿತ್ತುಹೋಗುವ ಮಟ್ಟಿಗೆ ನಾವೆಲ್ಲಾ ನಕ್ಕಿದ್ದೆವು!!!
ಏನೂ ಇನ್ನೂ ಗೊತ್ತಾಗಿಲ್ವಾ ಎಲ್ಲರೂ ಯಾಕೆ ನಕ್ಕಿದ್ದು ಅಂತ? ಅದೇ, ಕರೆಂಟ್ ಹೋದಾಗ ಗೆಸ್ಟ್ ಒಬ್ಬರು ಬಂದಿದ್ದರಲ್ಲ ಅವರಿಗೆ ಕತ್ತಲಲ್ಲಿ ನಮ್ಮ ಅಕ್ಕ ತಂದು ಕೊಟ್ಟಿದ್ದು ಏನು ಅಂತ ಅಂದುಕೊಂಡಿರಿ.............?!?! ಹ ಹ ಹ್ಹ ಹ್ಹ ಹ್ಹಾ ಹ್ಹಾ........, ಈಗಲೂ ನೆನಪಿಸಿಕೊಂಡರೆ ನನಗೆ ನಗು ತಡೆಯುವುದಕ್ಕೆ ಆಗುತ್ತಿಲ್ಲ. ಪಾಪ ಅವರು, ಕಾಫಿ ಅಂತ ಅಂದುಕೊಂಡು, ಕೊಟ್ಟಿದ್ದ ಬಿಸಿ ಬಿಸಿ ರಸಂ ಅನ್ನೇ, ಅಷ್ಟು ಜನರ ಮುಂದೆ ಏನೂ ಮಾತನಾಡದೇ ಕುಡಿದು ಎದ್ದು ಹೋಗಿದ್ದರು ಕತ್ತಲಲ್ಲೇ!
ವಾಸನೆಯಲ್ಲಿ ಗೊತ್ತಾಗಲಿಲ್ಲವೇ ಅಂತ ನೀವು ಕೇಳಬಹುದು, ಮೊದಲೇ ಮದುವೆಮನೆ ಎಷ್ಟೆಲ್ಲಾ ತರಹ ವಾಸನೆಗಳು ಸೇರಿಕೊಂಡಿರುತ್ತವೆ ಅದೂ ಅಲ್ಲದೆ ಮುಚ್ಚಿ ಇಟ್ಟಿದ್ದ ತಟ್ಟೆಯ ಸಮೇತ ತಂದು ಅವರ ಮುಂದೆಯೇ ತೆರೆದು ಕೊಟ್ಟಿದ್ದಳು! ಹೇಳಿಕೇಳಿ ಅವಳು ಮದುವೆ ಹುಡುಗಿ, ತನುವೆಲ್ಲೋ ಮನವೆಲ್ಲೂ ಒಟ್ಟಿನಲ್ಲಿ ಒಂದು ಅಚಾತುರ್ಯವಂತೂ ನಡೆದಿತ್ತು!!!
ಈಕೆಯ ಅವಾಂತರಗಳು ಇನ್ನಷ್ಟು ಇವೆ. ಮುಂದೆ ಯಾವಾಗಾದ್ರೂ ಇದೆ ರೀತಿ ಹೇಳ್ತೀನಿ, ಆಯ್ತಾ ಅಲ್ಲಿವರೆಗೂ ನಗ್ತಾನೆ ಇರಿ!!!!!
Tuesday, September 22, 2009
ಗೆಳತಿಗಾಗಿ......!
ನೀನೆಲ್ಲಿರುವೆ ನನ್ನ ಗೆಳತಿಯೇ?
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ
ಎಲ್ಲೆಲ್ಲೂ ನಿನ್ನ ನೆನಪೇ ನನ್ನ ಕಾಡುತಿಹುದಲ್ಲ
ಕಾಣದಂತೆ ನೀ ಏಕೆ ಹೀಗೆ ಮರೆಯಾದೆ ಸಖಿಯೇ!
ನನಗೆ ನೀನಿದ್ದೆ, ನಿನಗೆ ನಾನಿದ್ದೆ
ನಮ್ಮ ಕಷ್ಟ ಸುಖಗಳ ಹಂಚಿಕೊಳುವಲ್ಲಿ
ನಿನ್ನೆಲ್ಲಾ ಇಷ್ಟಾನಿಷ್ಟಗಳನ್ನು ಹೇಳಿದ್ದೆ ನನ್ನಲ್ಲಿ
ನಿನ್ನ ಮಾತು ಮೌನಗಳಿಗೆ ನಾ ಕಿವಿಯಾಗಿದ್ದೆ
ಮದುವೆಯಾಗಿ ವರ್ಷಗಳೈದು ಕಳೆದರೂ
ತುಂಬಿಲ್ಲ ಎನ್ನ ಮಡಿಲು ಎಂದು ಕೊರಗಿದ್ದೆ ನೀನು
ಅದೆಷ್ಟು ಸಾಂತ್ವನದ ನುಡಿಗಳನು ಹೇಳಿದ್ದೆ ನಾನು
ಅದಕಾಗಿ ಪೂಜೆ, ಪ್ರಾರ್ಥನೆಗಳನ್ನು ಮಾಡಿದ್ದೆವು ನಾವು
ಅದಾವ ಭಗವಂತನ ಕರುಣೆಯೋ ಕಾಣೆ
ಮೊರೆ ಆಲಿಸಿದ ದೇವರು ನಿನ್ನಾಸೆಯ ಪೂರೈಸಿದ್ದ
ಗರ್ಭ ಧರಿಸಿದೆ, ತಾಯಿಯಾದೆ
ಮುದ್ದಾದ ಮಗುವೊಂದಕ್ಕೆ ಜನ್ಮ ನೀಡಿದೆ!
ನೋಡ ನೋಡುತ್ತಾ, ಕಾಲ ಕಳೆದಂತೆ
ಕ್ಷಣ ಕೂಡ ಮಗನನ್ನು ಅಗಲಿರದಂತೆ
ಜೀವಕ್ಕೆ ಉಸಿರಂತೆ, ನಯನಕ್ಕೆ ನೋಟದಂತೆ
ಅವನ ಆಟ ಊಟ ಪಾಟಗಳಲಿ ನೀ ಮುಳುಗಿ ಹೋದೆ
ಆದರೇ..... ನಿನ್ನದೇ ಮುದ್ದು ಕಂದಮ್ಮನಿಗೆ
ವರ್ಷಗಳು ಐದು ಕಳೆಯುವಾ ವೇಳೆಗೆ
ತಿರುಗಿ ಬಾರದ ಲೋಕಕ್ಕೆ ನೀ ಹೊರಟುಹೋದೆ
ಯಾರಿಗೂ ಕಾಣದಂತೆ ಕಣ್ಮರೆಯಾದೆ ನಿನಗಿದು ನ್ಯಾಯವೇ?
ಲೋಕ ಜ್ಞಾನ ಅರಿಯದ ಮಗುವನ್ನು
ಅನಾಥನನ್ನಾಗಿ ಮಾಡಿದೆ ನೀನು
ಇದಕೆ ಏಕೆ ಕೊರಗಿದ್ದೆ ಅಂದು ನೀನು
ಮಗುವಾಗಲಿಲ್ಲವಲ್ಲ ಎಂದು
ನನ್ನೆಲ್ಲ ಪ್ರಶ್ನೆಗಳಿಗೆ ನಿನ್ನ ಮಗನ ಭವಿಷ್ಯಕ್ಕೆ
ನೀನೆಲ್ಲಿದ್ದರೂ ಬಂದು ಉತ್ತರ ತಿಳಿಸು
ಇಲ್ಲದಿದ್ದರೆ...... ನಾವಿಬ್ಬರೂ ನಿನ್ನನ್ನು,
ಕ್ಷಮಿಸಲಾರೆವು ಎಂದೆಂದಿಗೂ.........!!!
ನಿನ್ನದೇ ನೆನಪಲ್ಲಿ ದುಃಖಿಯಾಗಿರುವ ನಿನ್ನ ಗೆಳತಿ........!!!!!
Saturday, September 5, 2009
ಅಪಾತ್ರ ದಾನ.....
ನಿಜ ಆ ಕೋತಿಯು ಗೇಟಿನ ಒಳ ಭಾಗ, ಹೊರಭಾಗ ಮತ್ತು ರಂಗೋಲಿ ಬಿಡುವ ಜಾಗದಲ್ಲೆಲ್ಲ ಹಾಲನ್ನು ಚೆಲ್ಲಾಡಿತ್ತು. ಅದನ್ನೆಲ್ಲಾ ನೋಡಿದ ನನಗೆ ಯಾಕೋ ಕೋಪ ಬರಲಿಲ್ಲ. ನಾನು ಮನಸ್ಸಿನಲ್ಲೇ, ಹೋಗಲಿ ಬಿಡು ನಮಗೆ ಒಂದು ದಿನ ಹಾಲಿಲ್ಲದಿದ್ದರೆ ಏನಂತೆ, ಒಂದು ಮೂಕ ಪ್ರಾಣಿ ತನ್ನ ಹೊಟ್ಟೆ ತುಂಬಿಸಿ ಕೊಂಡಿತಲ್ಲಾ ಅಂದುಕೊಂಡು ಒಳಗೆ ಬಂದು ಒಂದು ಬಾಳೆಹಣ್ಣನ್ನು ಸಹ ಅದಕ್ಕೆ ತಂದು ಕೊಟ್ಟೆ. ನನಗೆ ಅದರ ಕೈಗೆ ಕೊಡಲು ಭಯ ಎಲ್ಲಿ ಪರಚಿ ಬಿಡುತ್ತೋ ಎಂದು. ಅದಕ್ಕೆ ಬಾಗಿಲ ಹತ್ತಿರ ನಿಂತುಕೊಂಡು ಮೆತ್ತಗೆ ಎಸೆದೆ. ಅದು ಹಣ್ಣನ್ನು ಕ್ಯಾಚ್ ಹಿಡಿದು, ಕತ್ತು ಮುಂದೆ ಮಾಡಿ ನನ್ನನ್ನೇ ನೋಡುತ್ತಾ ಗುರ್ರ್ ಎಂದು ಗುಟುರು ಹಾಕಿತು. ಆಗ ನಾನು ನನ್ನಲ್ಲೇ ಅಂದುಕೊಂಡೆ, ಹಣ್ಣು ತೋರಿಸಿ ಅದಕ್ಕೆ ಕೊಡದೆ ಇದ್ದಿದ್ದರೆ ಅದು ಗುರಾಯಿಸುವುದು ಸರಿ, ಹಣ್ಣು ಕೊಟ್ಟ ಮೇಲೂ ಯಾಕೆ ಗುರ್ರ್ ಎನ್ನುತ್ತಿದೆ ಅಂತ! ಆದರೆ ಅದು ಮಾಡಿದ ರೀತಿ ನೋಡಿ, ನನಗೆ ಪ್ರಾಣಿಗಳ ಭಾಷೆ ತಿಳಿಯದಿದ್ದರೂ, ಅದು ಧನ್ಯವಾದ ಹೇಳಿತು ಎಂದು ಗೊತ್ತಾಯಿತು. ಓಕೆ ಅಂತ ಹೇಳಿ ಅದಕ್ಕೊಂದು ಸ್ಮೈಲ್ ಕೊಟ್ಟು, ಬಾಗಿಲು ಮುಚ್ಚಿ ಒಳಗೆ ಬಂದೆ.
ಕೆಲಸದಿಂದ ಹಿಂದಿರುಗಿ ಬಂದ ನನ್ನವರಿಗೆ ಎಲ್ಲವನ್ನೂ ಹೇಳಿ, ಏನೋ, ಒಂದು ದಿನ ಹೀಗೆ ಮಾಡಿತು ಆದರೆ ಹಾಲಿಡುವುದಕ್ಕೆ ಬೇರೆ ವ್ಯವಸ್ಥೆ ಮಾಡದಿದ್ದರೆ ನಮಗೆ ಹಾಲೇ ಸಿಗುವುದಿಲ್ಲ ಎಂದು ಹೇಳಿದೆ. ಅದಕ್ಕವರು ಆಯಿತು ಬಿಡು, ಸ್ವಲ್ಪ ದಿನ ಬ್ಯಾಗ್, ಬುಟ್ಟಿ ಯಾವುದೂ ಇಡುವುದು ಬೇಡ, ಪೋಸ್ಟ್ ಡಬ್ಬದ ಒಳಗೆ ಹಾಲು ಇಡುವಂತೆ ಹಾಲಿನವನಿಗೆ ಹೇಳುತ್ತೇನೆ ಎಂದರು.
ಇದೆಲ್ಲ ಕೋತಿ ಕಥೆ ನಡೆದದ್ದು ಕಳೆದ ತಿಂಗಳು. ಇತ್ತೀಚಿಗೆ ಏನಾಯಿತು ಗೊತ್ತಾ.....?ಕೆಲವು ದಿನಗಳ ಮಟ್ಟಿಗೆ ನಾವು ಯಾವುದೋ ವ್ರತ ಕೈಗೊಂಡಿದ್ದರಿಂದ, ವ್ರತ ಮುಗಿಯುವ ವರೆಗೂ ಆವತ್ತಿನ ಅಡುಗೆ ಆ ದಿನವೇ ಮುಗಿಸಬೇಕು, ಅಕಸ್ಮಾತ್ ಮಿಕ್ಕಿದರೂ ತಂಗಳು ತಿನ್ನಬಾರದು ಎಂದು ಹಿರಿಯರು ಹೇಳಿದ್ದರು. ಅದರಂತೆಯೇ ನಾನು ಸಾಧ್ಯವಾದಷ್ಟೂ ಅಳತೆಯಾಗಿಯೇ ಅಡುಗೆ ಮಾಡುತ್ತಿದ್ದೆ. ಏಕೆಂದರೆ ದುಬಾರಿಯ ಈ ಕಾಲದಲ್ಲಿ ಪದಾರ್ಥಗಳನ್ನು ವೇಸ್ಟ್ ಮಾಡುವ ಹಾಗಿಲ್ಲವಲ್ಲ.
ಆದರೆ ಆ ದಿನ (sept 02) ನನ್ನ ಗೆಳತಿಯ ಸಾವಿನ ಸುದ್ದಿ ತಿಳಿದ ನನಗೆ, ಆ ದುಃಖದಲ್ಲಿ ಊಟ ಸೇರಿರರಿಲ್ಲ. ಮಾರನೆ ದಿನ ಅದನ್ನು ನಾವು ಉಪಯೋಗಿಸುವ ಹಾಗು ಇರಲಿಲ್ಲ ಮತ್ತು ಅದನ್ನು ಹಾಗೆ ಕಸದಲ್ಲಿ ಚಲ್ಲುವ ಮನಸ್ಸು ಬರಲಿಲ್ಲ. ಹಾಗಾಗಿ ನಾನು ಹೊರಗೆ ಗುಡಿಸಿ ರಂಗೋಲಿ ಹಾಕುತ್ತಿದ್ದಾಗ, ಮುಂದಿನ ರಸ್ತೆಯಲ್ಲಿ ಫುಟ್ಪಾತ್ ಮೇಲೆ ಪ್ಲಾಸ್ಟಿಕ್ ಸಾಮಾನುಗಳನ್ನು ಮಾರುವ ಒಬ್ಬಾಕೆ, (ಅವಳು ನಮ್ಮ ಅಕ್ಕಪಕ್ಕದ ಮನೆಗಳಲ್ಲೂ ಕೆಲಸ ಮಾಡಲು ಬರುತ್ತಾಳೆ, ಅಲ್ಲದೆ ನಾನು ತರಕಾರಿ, ಮತ್ತು ದಿನಸಿ ಸಾಮಾನುಗಳನ್ನು ತರಲು ಆಗಾಗ ಅಂಗಡಿಗೆ ಹೋದಾಗ ನನ್ನನ್ನು ಕಂಡಾಗ ಸ್ಮೈಲ್ ಕೊಡುತ್ತಿದ್ದಳು, ಒಮ್ಮೊಮ್ಮೆ ಮಾತಾಡಿಸುತ್ತಲೂ ಇದ್ದಳು. ಅವಳಿಗೆ ಮೂರು ಜನ ಮಕ್ಕಳು.) ಅವಳನ್ನು ಕಂಡಾಗ, ಪೊಂಗಲ್ ಇದೆ ಕೊಡಲಾ, ತಗೋತೀಯಾ....? ಎಂದು ಕೇಳಿದೆ. ಅದಕ್ಕವಳು ತಂಗಳ ಅಕ್ಕ ಎಂದು ಕೇಳಿದಳು. ಹ್ಞೂ.... ಹೌದು ಚೆನ್ನಾಗೇ ಇದೆ, ರಾತ್ರಿನೂ ಬಿಸಿ ಮಾಡಿದ್ದೀನಿ ಬೇಕಿದ್ದರೆ ಈಗಲೂ ಬಿಸಿ ಮಾಡಿ ಕೊಡುತ್ತೀನಿ ಎಂದು ಹೇಳಿದೆ. ಆಗ ಅವಳೊಂದಿಗೆ ಬಂದಿದ್ದ ಒಬ್ಬ ಮಗನಿಗೆ, ಆಂಟಿ ಅನ್ನ ಕೊಡ್ತಾರಂತೆ ಇಸ್ಕೊಂಡು ಬಾರೋ ಅಂತ ಹೇಳಿ ಅವನನ್ನು ಬಿಟ್ಟು ಹೋದಳು. ಹೇಳಿದ ಪ್ರಕಾರ ನಾನು ಬಿಸಿ ಮಾಡಿ ಕೆಲವು ನಿಮಿಷಗಳಲ್ಲಿಯೇ ಆ ಹುಡುಗನ ಕೈಗೆ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪೊಂಗಲ್ ಅನ್ನು ತುಂಬಿಸಿ ಕೊಟ್ಟೆ.
ಅದಾದ ನಂತರ ಆ ದಿನವೆಲ್ಲ ನಾನು ಹೊರಗೆಲ್ಲೂ ಹೋಗಲೇ ಇಲ್ಲ. ಆ ದಿನ ಮಾಡಿದ್ದ ಬಿಸಿಬೇಳೆ ಬಾತ್ ಕೂಡ ಸ್ವಲ್ಪ ಮಿಕ್ಕಿ ಹೋಯಿತು. (ಏನು ಮಾಡುವುದು ಅಡುಗೆ ಎಂದರೆ ಹಾಗೆ ಅಲ್ಲವೇ ಎಷ್ಟು ಅಳತೆಯಾಗಿ ಮಾಡಲು ಪ್ರಯತ್ನಿಸಿದರೂ ಸ್ವಲ್ಪವಾದರೂ ಹೆಚ್ಚು ಅಥವಾ ಕಡಿಮೆ ಆಗೇ ಆಗುತ್ತದೆ.) ಅದನ್ನೂ ಅದೇ ರೀತಿ ಆ ಮಕ್ಕಳಿಗೆ ಕೊಡೋಣ ಎಂದುಕೊಂಡೆ, ಆದರೆ ಆದಿನ ಅವಳಾಗಲಿ, ಮಕ್ಕಳಾಗಲಿ ಕಾಣಿಸಲಿಲ್ಲ. ಸರಿ ಅಲ್ಲೇ ಮುಂದಿನ ರಸ್ತೆಯಲ್ಲೇ ಇರುತ್ತಾಳಲ್ಲ, ಅಂಗಡಿಗೆ ಹೋದಾಗ ನಾನೇ ತೆಗೆದುಕೊಂಡು ಹೋಗಿ ಕೊಡೋಣ ಎಂದುಕೊಂಡು ಸುಮ್ಮನಾದೆ. ಹಾಗೆ ಸ್ವಲ್ಪ ಹೊತ್ತಿನ ನಂತರ ಅಂಗಡಿಗೂ ಹೋದೆ ಆದರೆ ಅನ್ನವನ್ನು ತೆಗೆದುಕೊಂಡು ಹೋಗಲು ಮರೆತೇ.
ಅರೆರೆ.... ತರಕಾರಿ ಕೊಂಡು ವಾಪಸ್ ಮನೆಗೆ ಬರುವಾಗ ನಾನಲ್ಲಿ ಕಂಡ ದೃಷ್ಯವೇನು?ಅಲ್ಲಿ ಖಾಲಿ ಇದ್ದ ಜಾಗದ ಫೆನ್ಸಿಂಗ್ ಹತ್ತಿರ, ನಾನು ನೆನ್ನೆ ಕೊಟ್ಟಿದ್ದ ಆ ಪೊಂಗಲ್ ಡಬ್ಬಿ ಅಲ್ಲಿ ಬಿದ್ದಿತ್ತು ಅಷ್ಟೇ ಅಲ್ಲ ಅದರಲ್ಲಿದ್ದ ಪೊಂಗಲ್ ಎಲ್ಲವೂ ಅಲ್ಲಿನ ಮಣ್ಣಲ್ಲಿ ಬೆರೆತು ಹೋಗಿತ್ತು! ಅದನ್ನು ಕಂಡು ಬೇಸರದಿಂದ ಮನೆಗೆ ಬಂದು, ಒಂದು ಕ್ಷಣ ಯೋಚಿಸಿದೆ. ನಾವು ಸುಮ್ಮನೆ ತಪ್ಪು ತಿಳಿದುಕೊಳ್ಳ ಬಾರದು. ಆ ಡಬ್ಬಿ ಅಕಸ್ಮಾತ್ ಅವನ ಕೈಯಿಂದ ಜಾರಿ ಬಿದ್ದಿರಬಹುದೇ ಎಂದು. ಆದರೆ ಆ ರೀತಿ ಆಗಿರಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿಂದ ಐದಾರು ಹೆಜ್ಜೆ ಮುಂದೆ ಹೋದರೆ ಅಲ್ಲಿ ಮರದ ಪಕ್ಕದಲ್ಲಿ ಕಸ ಹಾಕುವ ಜಾಗವಿದೆ ಅಲ್ಲೇ ಬಿದ್ದಿತ್ತಲ್ಲಾ ಆ ಡಬ್ಬಿ.
ಅವಳು ತನಗೆ ಬೇಡ ಎಂದು ಹೇಳಿದ್ದರೂ, ಅದೇ ರಸ್ತೆಯಲ್ಲಿ ಕಟ್ಟಡದ ಕೆಲಸ ಮಾಡುವವರ ಮಕ್ಕಳಿದ್ದರು ಅವರಿಗಾದರೂ ಕೊಡುತ್ತಿದ್ದೇನಲ್ಲಾ, ಅಕ್ಕಿ, ಬೇಳೆ ಬೆಲೆಗಳು ದುಬಾರಿಯಾಗಿರುವ ಈ ಕಾಲದಲ್ಲಿ ಹೀಗೆ ಮಾಡಿದಳಲ್ಲ ಎಂದು ಬೇಜಾರಾಯಿತು. ಆಗಲೇ ನನಗೆ ಹಿಂದಿನ ಕೋತಿಯ ಪ್ರಸಂಗ ನೆನಪಾಯಿತು ಮತ್ತು ಅಣ್ಣಾವ್ರ ಹಾಡೊಂದು ನೆನಪಿಗೆ ಬಂದಿತು......ಪ್ರಾಣಿಗಳೇ ಗುಣದಲಿ ಮೇಲು........., ಮಾನವನದಕಿಂತ ಕೀಳು......!
ಅಂದಿನಿಂದಾ ಇಂದಿನವರೆಗೂ ಅವಳಾಗಲಿ ಅವಳ ಮಕ್ಕಳಾಗಲಿ ನನಗೆ ಕಣ್ಣಿಗೆ ಕಾಣಿಸಲೇ ಇಲ್ಲ.....!!
Friday, September 4, 2009
ಪುನರಾಗಮನ
ಸ್ನೇಹಿತರೇ, ನಾವು ಎಲ್ಲಿದ್ದರೂ, ಹೇಗಿದ್ದರೂ ಜೀವನ ತನ್ನ ಪಾಡಿಗೆ ತಾನು ಮುನ್ನಡೆಯುತ್ತಿರುತ್ತದೆ! ಈ ಸತ್ಯ ಎಲ್ಲರಿಗೂ ತಿಳಿದಿರುವಂತಹುದು. ಈ ಜೀವನ ಜಂಜಾಟದಲ್ಲಿ, ಪ್ರತಿಯೊಬ್ಬ ಮನುಷ್ಯನೂ ಎಲ್ಲಾ ತರಹದ ಅನುಭೂತಿಯನ್ನು ಅನುಭವಿಸಬೇಕಾಗುತ್ತದೆ. ನೋವು, ನಲಿವು, ಸುಖ, ದುಃಖ, ಸೋಲು, ಗೆಲುವು, ಸಂತೋಷ, ವ್ಯಥೆ.... ಹೀಗೆ ಇನ್ನೂ ಮುಂತಾದುವು. ಇವೆಲ್ಲಾ ಎಲ್ಲರ ಬದುಕಿನಲ್ಲೂ ಆಗಾಗ ಬಂದು ಹೋಗುವಂತಾ, ಅನುಭವಗಳು.
ಇಷ್ಟು ದಿನಗಳ ನನ್ನ ಗೈರು ಹಾಜರಿಯಲ್ಲಿ ನಾನು ಇವೆಲ್ಲವನ್ನೂ ಅನುಭವಿಸಿದ್ದೇನೆ. ಅಂದರೆ ಇವೆಲ್ಲ ನಮ್ಮ ಜೀವನದ ಒಂದು ಭಾಗ ನಿಜ, ಆದರೆ ಇವೆಲ್ಲವನ್ನೂ, ಒಟ್ಟೊಟ್ಟಿಗೆ ಅಥವಾ ಒಂದರ ನಂತರ ಮತ್ತೊಂದು ಎನ್ನುವಂತೆ ಬೆಂಬಿಡದ ಭೂತವನ್ನು ಸಂಭಾಳಿಸಿದಂತೆ ಈ ಎಲ್ಲಾ ಸಂಧರ್ಭಗಳನ್ನೂ ಒಂದು ಸೀಸನ್ ಎಂಬಂತೆ ಒಮ್ಮೆಲೇ ಎಲ್ಲ ತರಹದ ಅನುಭೂತಿಯನ್ನು ಪಡೆದುಕೊಂಡೆ.
ಸಮಾರಂಭ, ಪ್ರವಾಸ, ಕೆಲಸ, ಓಡಾಟ, ಆತ್ಮೀಯರೊಂದಿಗಿನ ಒಡನಾಟ, ಇವೆಲ್ಲವುಗಳ ಜೊತೆ ಜೊತೆಯಲ್ಲೇ, ಇತ್ತೀಚಿಗೆ ನನ್ನ ಆತ್ಮೀಯ ಗೆಳತಿಯೊಬ್ಬಳ ಅಗಲಿಕೆಯ ನೋವು, ದುಃಖ ಇವೆ ಮುಂತಾದುವು. ಈ ಎಲ್ಲ ನೆನಪುಗಳನ್ನು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಜೊತೆಗೆ ಕೆಲವು ಅಪೂರ್ಣ ಲೇಖನಗಳನ್ನು ಪೂರ್ತಿಗೊಳಿಸಬೇಕಿದೆ.
Friday, July 24, 2009
ಮದುವೆ ಕರೆಯೋಲೆ.....!
ಆಷಾಡ ಕಳೆದು ಶ್ರಾವಣ ಮಾಸ ಬಂದಿತು! ಇನ್ನೇನು ಮದುವೆ ಕಾಲ, ಸಂಭ್ರಮ ಮತ್ತು ಸಡಗರ, ಜೊತೆಗೆ ಸಾಲಾಗಿ ಹಬ್ಬಗಳು ಬೇರೆ ಬರುತ್ತವೆ. ಯಾರ ಮದುವೆ ಇರಬಹುದಪ್ಪಾ, ಆಹ್ವಾನ ಪತ್ರಿಕೆ ಕಳಿಸುತ್ತಿದ್ದಾರೆ ಅಂದುಕೊಂಡಿರಾ? ಖಂಡಿತ ಮದುವೆ ನನ್ನದಂತೂ ಅಲ್ಲ!!! ಇನ್ಯಾರದು ಅಂತ ತಿಳಿದು ಕೊಳ್ಳುವ ತವಕಾನಾ? ಯಾಕಷ್ಟು ಅವಸರ ನಿಧಾನವಾಗಿ, ನೆಮ್ಮದಿಯಾಗಿ ಲಗ್ನಪತ್ರಿಕೆ ಓದಿ ಮತ್ತು ನೀವೆಲ್ಲರೂ ಈ ಸಂತೋಷ ಸಮಾರಂಭದಲ್ಲಿ ಭಾಗಿಯಾಗಿ.
ಅಂದ ಹಾಗೆ ಸುಮ್ಮನೆ ವಧು ವರರ ಹೆಸರು ಮತ್ತು ಮದುವೆ ಸ್ಥಳ ಮಾತ್ರ ಓದಿ ಸುಮ್ಮನಾಗಬೇಡಿ! ಒಂದು ಅಕ್ಷರವೂ ಬಿಡದೆ ಪೂರ್ತಿ ಓದಿಬಿಡಿ ಆಗ ನಿಮಗೆ ಅನಿಸಿದ್ದು ನನಗೆ ತಿಳಿಸಿ .
ಯಾವುದೇ ಸಮಾರಂಭವಿರಲಿ ಅಲ್ಲಿ ಸಿಹಿ ತಿನಿಸು ಇಲ್ಲದಿದ್ದರೆ ಹೇಗೆ? ಅದು ಅಪೂರ್ಣ ಆಗುವುದಿಲ್ಲವೇ?
ಹೌದು, ಯಾವುದೇ ಆಚರಣೆ ಇರಲಿ ಅಲ್ಲಿ ಸಿಹಿ ತಿಂಡಿ ಇರಲೇ ಬೇಕು. ಆದರೆ ಈ ಸಿಹಿಗಳೇ ಮದುವೆ ಸಂಭ್ರಮ ನಡೆಸಿಕೊಂಡರೆ ಹೇಗಿರುತ್ತೆ......?!
ಮುಂದೆ ಓದಿ......
ಸ್ವಸ್ತಿಶ್ರೀ ಕೇಸರಿ ಬಾತ್ ನಾಮ ಸಂವತ್ಸರ ದಿನಾಂಕ 46 / 83 / 2896 ರಂದು
ಇವರ ವಿವಾಹ ಮಹೋತ್ಸವವನ್ನು, ಮೈಸೂರ್ ಪಾಕ ನಗರದಲ್ಲಿ ಇರುವ ಲಾಡು ಬಡಾವಣೆಯ ಧೂದ್ ಪೇಢ ಛತ್ರದಲ್ಲಿ ನಡೆಯುವಂತೆ, ಬಾಧೂಷರವರು ಮತ್ತು ಚಂಪಾಕಲಿಯವರು ಜೊತೆಗೆ ಇನ್ನೂ ಅನೇಕ ಸಿಹಿಗಳು ನಿಶ್ಚಯಿಸಿರುವುದರಿಂದ, ತಾವುಗಳು ತಮ್ಮ ಪರಿವಾರ ಸಮೇತ ಮದುವೇ ಛತ್ರಕ್ಕೆ ಬಂದು ಊಟಮಾಡಿ ಕೈ ತೊಳೆದುಕೊಂಡು, ವಧು ವರರನ್ನು ಆಶೀರ್ವದಿಸಬೇಕೆಂದು ಕೋರುವವರು, ಶ್ರೀ ಬೂಂದಿ ರಾವ್ ಮತ್ತು ಶ್ರೀ ಚಿರೋಟಿ ರಾವ್
ತಮ್ಮ ಸುಖ ಆಗಮನವನ್ನು ಬಯಸುವವರು:
ಬರ್ಫಿ, ಹಾಲುಖೋವ ಮತ್ತು ಮುಂತಾದ ಸಿಹಿ ಮಿತ್ರರು.......!!!!!
ಮುಖ್ಯ ಸೂಚನೆ:ತಮ್ಮ ಉಡುಗೊರೆಗಳನ್ನು ಪಾಯಸ ಮತ್ತು ಒಬ್ಬಟ್ಟು ಇವರುಗಳ ಕೈಗೆ ಕೊಡಬೇಕಾಗಿ, ತುಪ್ಪದ ವಿನಂತಿ!
ವಿವರಗಳಿಗೆ ಇಲ್ಲಿ ಸಂಪರ್ಕಿಸಿ :
ರಸಗುಲ್ಲ ಪ್ರಿಂಟರ್ಸ್, ಜಹಾಂಗೀರ್ ಪುರ!